ಪ್ರಕರಣವೊಂದರ ಸಾಕ್ಷಿಗಳಿಬ್ಬರಿಗೆ ತಂಡದಿಂದ ಹಲ್ಲೆ
ಬಂಟ್ವಾಳ, ಆ. 18: ಪ್ರಕರಣವೊಂದರ ಸಾಕ್ಷಿಗಳಿಬ್ಬರ ಮೇಲೆ ಏಳು ಜನರ ತಂಡವೊಂದು ಹಲ್ಲೆ ನಡೆಸಿ ಕೊಲೆ ಬೆದರಿಯೊಡ್ಡಿದ ಘಟನೆ ಶುಕ್ರವಾರ ನಡೆದಿದೆ.
ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಅಬ್ದುಲ್ಲಾ(65) ಮತ್ತು ಅವರ ಪುತ್ರ ಫಾರೂಕ್(29) ಹಲ್ಲೆಗೊಳಗಾದವರು.
ಈ ಇಬ್ಬರು ವಿಟ್ಲದ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂಡವೊಂದು ಜೂನ್ 28ರಂದು ಮಧ್ಯಾಹ್ನ ಕಬಕದ ಅಂಗಡಿಯಲ್ಲಿ ಕುಳಿತಿದ್ದ ಕಲ್ಲಂದಡ್ಕದ ಲಾರಿ ಚಾಲಕ ಅಬ್ದುಲ್ ಖಾದರ್ ಮೇಲೆ ತಲವಾರು ದಾಳಿ ನಡೆಸಿ ಕೊಲೆ ಯತ್ನ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಪ್ರಕರಣದಲ್ಲಿ ಫಾರೂಕ್ ಹಾಗೂ ಅಬ್ದುಲ್ಲ ಪ್ರಮುಖ ಸಾಕ್ಷಿಗಳಾಗಿದ್ದಾರೆ. ಫಾರೂಕ್ ಹಾಗೂ ಅಬ್ದುಲ್ಲ ಶುಕ್ರವಾರ ಮಸೀದಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಡ್ಡಗಟ್ಟಿದ ಏಳು ಜನರ ತಂಡ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಖಾದರ್ ಕೊಲೆ ಯತ್ನ ಪ್ರಕರಣದಲ್ಲಿ ಉಮ್ಮರ್ ವಿರುದ್ಧ ಸಾಕ್ಷಿ ಹೇಳಬಾರದು. ಹೇಳಿದರೆ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದೆ ಎಂದು ಗಾಯಾಳುಗಳು ವಿಟ್ಲ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಗಾಯಾಳುಗಳು ಆರೋಪಿಸಿ ಲತೀಫ್, ಶಾಕಿರ್, ಕಾಸಿಂ, ಇಬ್ರಾಹೀಂ, ನೂರುದ್ದೀನ್, ಪತಾವುಲ್ಲಾ ಮತ್ತು ಇರ್ಷಾದ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.