ಪರಿಶಿಷ್ಟರ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ: ಜಕ್ಕಪ್ಪಣ್ಣವರ್
ಮಂಗಳೂರು, ಆ. 22: ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ವತಿಯಿಂದ ಮಹಾಸಭೆ ಹಾಗೂ ನೇರ ಸಂವಾದ ಕಾರ್ಯಕ್ರಮವು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆಯಿತು.
ರಾಜ್ಯ ಘಟಕದ ಅಧ್ಯಕ್ಷ ಜಕ್ಕಪ್ಪಣ್ಣವರ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಪೂರಕವಾದ ಕೆಲಸ ಕಾರ್ಯಗಳು ನಡೆಯುತ್ತಿವೆ. ಪರಿಶಿಷ್ಟ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಕುದ್ಮುಲ್ ರಂಗರಾವ್ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಘಟಕದ ಅಧ್ಯಕ್ಷ ಶೇಖರ್ ಕುಕ್ಕೇಡಿ ಮಾತನಾಡಿ, ಪರಿಶಿಷ್ಟರು ಸಮಾಜದಲ್ಲಿ ಇಂದು ತಲೆ ಎತ್ತಿ ಬದುಕಲು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ ಎಂದರು.
ಎಐಸಿಸಿಯ ಉಸ್ತುವಾರಿ ಡಾ. ಸಿರಿವೆಲ್ಲಾ ಪ್ರಸಾದ್, ರಾಜ್ಯ ಉಸ್ತುವಾರಿ ಪ್ರಸನ್ನ ಕುಮಾರ್, ಹಾಜಿ ಇಬ್ರಾಹೀಂ ಕೋಡಿಜಾಲ್, ಪದ್ಮನಾಭ ನರಿಂಗಾನ, ಉಪಮೇಯರ್ ರಜನೀಶ್, ಬಲರಾಜ್ ರೈ, ಸದಾಶಿವ ಉಳ್ಳಾಲ, ವಸಂತಿ, ಅಬ್ದುಲ್ಲಾ, ಪ್ರೇಮನಾಥ ಬಳ್ಳಾಲ್ಬಾಗ್, ದಿನೇಶ್ ಪಿ. ಎಸ್. ಉಪಸ್ಥಿತರಿದ್ದರು.ರಘುರಾಜ್ ಕದ್ರಿ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.