ಓಣಂ ಕನ್ನಡ ಜಾನಪದ ಉತ್ಸವ ಕಾರ್ಯಕ್ರಮ
ಉಪ್ಪಳ,ಸೆ.09: ಇಂದಿನ ಮುಂದುವರಿದ ತಂತ್ರಜ್ಞಾನದ ಯುಗದಲ್ಲಿ ನಾವು ಜೀವಿಸುತ್ತಿರುವುದು ಹೌದಾದರೂ, ಮಾನವನಾಗುವಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯ ಬೇರುಗಳು ಗಟ್ಟಿಯಾಗಿರಲೇಬೇಕು. ಮೂಲತತ್ವದಿಂದ ಬೇರ್ಪಟ್ಟು ಜೀವಿಸುವುದು ಅಭದ್ರತೆ, ಅಶಾಂತಿ ಮತ್ತು ನೀರಸತೆಗೆ ಕಾರಣವಾಗುವುದರಿಂದಲೇ ಇಂದಿಗೂ ಹಬ್ಬ ಆಚರಣೆಗಳು ನಡೆದುಕೊಂಡು ಬಂದಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗು ಸುಬ್ಬಯ್ಯಕಟ್ಟೆ ಕನ್ನಡ ಸಂಘ ಮತ್ತು ಟಿಎಎಸ್ಸಿಗಳ ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಮತ್ತು ಕೇರಳ ಜಾನಪದ ಅಕಾಡೆಮಿಗಳ ಸಹಕಾರದೊಂದಿಗೆ ಶನಿವಾರ ಕುಡಾಲು ಮೇರ್ಕಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಓಣಂ ಕನ್ನಡ ಜಾನಪದ ಉತ್ಸವ ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತಿಕವಾಗಿ ಇಂದು ಎಲ್ಲೆಡೆ ಪಸರಿಸುವ ಕನ್ನಡ ಭಾಷೆ, ಸಂಸ್ಕೃತಿ ಯಾವ ಮೂಲೆಯಲ್ಲಿದ್ದರೂ ತನ್ನ ಪರಂಪರೆಯ ಸೊಗಡನ್ನು ಉಳಿಸಿ ಬೆಳೆಸಿಕೊಂಡುಬರುತ್ತಿದೆ. ವೈಜ್ಞಾನಿಕವಾಗಿ ದೇಹ, ಮನಸ್ಸುಗಳೊಂದಿಗೆ ನೇರ ಸಂಬಂಧಹೊಂದಿರುವ ಕನ್ನಡ ಸಹಿತ ರಾಷ್ಟ್ರದ ಇತರ ಪ್ರಾದೇಶಿಕ ಭಾಷೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದೆಂದು ತಿಳಿಸಿದ ಅವರು, ಆಂಗ್ಲ ವ್ಯಾಮೋಹ ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾಗುವುದೆಂದು ಎಚ್ಚರಿಸಿದರು.ಓಣಂ, ನವರಾತ್ರಿ, ದೀಪಾವಳಿಗಳಂತಹ ಹಬ್ಬಗಳು ಸಾಂಸ್ಕøತಿಕ,ಸಾಮಾಜಿಕ ಒಗ್ಗಟ್ಟು, ಕ್ರಿಯಾಶೀಲ ಬದುಕಿಗೆ ಮೂಲಾಧಾರವಾಗಿದ್ದು, ಅವುಗಳ ಆಚರಣೆಯನ್ನು ಮುಂದೆ ದಾಟಿಸುವಲ್ಲಿ ಪ್ರಯತ್ನಗಳು ತುರ್ತು ಆಗಬೇಕಿದೆ ಎಂದು ಡಿ.ಎಚ್ ಶಂಕರಮೂರ್ತಿ ಕರೆನೀಡಿದರು.
ಕರ್ನಾಟಕ ವಿಧಾನ ಪರಿಷತ್ ಸಭಾಪತಿಯಾಗಿ ನಾನು ಕನ್ನಡಸ ಭಾಷೆ, ಸಂಸ್ಕøತಿಗಳ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡುತ್ತಿರುವುದಾಗಿ ಹೇಳಿದ ಅವರು, ಗಡಿನಾಡು,ಕ ಒಳನಾಡು ಮತ್ತು ಇತರೆಡೆಗಳ ಕನ್ನಡಿಗರ ಬಗ್ಗೆ ಸರಕಾರ ಸಂಪೂರ್ಣ ನೆರವು ಮತ್ತು ಅಗತ್ಯ ಸಹಕಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರೆತೆಗೆ ಪ್ರಯತ್ನಿಸಲಾಗುವುದೆಂದು ಅವರು ತಿಳಿಸಿದರು. ಗಡಿನಾಡು ಕಾಸರಗೋಡಿನ ಕನ್ನಡಿಗರ ಭಾಷಾ ಕೈಂಕರ್ಯ ಸ್ತುತ್ಯರ್ಹವಾಗಿದ್ದು, ಇನ್ನಷ್ಟು ವಿಸ್ಕೃತ ಚಟುವಟಿಕೆಗಳ ಮೂಲಕ ಬಲವರ್ಧನೆಗೆ ಅವಕಾಶವಾಗಲಿ ಎಂದು ಹಾರೈಸಿದರು.
ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತೀ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬ್ಲಾಕ್ ಪಂಚಾಯತ್ ಸದಸ್ಯ ಕೆ.ಆರ್ ಜಯಾನಂದ,ಪ್ರಸದ್ ರೈ ಕಯ್ಯಾರ್ ಶುಭಾಶಂಸನೆಗೈದರು. ಹಿರಿಯ ನಾಟಿ ವೈದ್ಯ ಮಾಥುಕುಟ್ಟಿ ವೈದ್ಯರ್,ಮಂಜೇಶ್ವರ ಭೂಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಜೆ.ಎಸ್,ಉದ್ಯಮಿ ಬಿ.ಎ.ಖಾದರ್, ನಿವೃತ್ತ ಉಪಜಿಲ್ಲಾಧಿಕಾರಿ ಬಾಲಕೃಷ್ಣ ಅಗ್ಗಿತ್ತಾಯ.ಬಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಸೀತಾರಾಮ ಶೆಟ್ಟಿ, ಕಸಾಪ ಗಡಿನಾಡ ಘಟಕದ ಸದಸ್ಯ ರಾಮಚಂದ್ರ .ಭಟ್ ಧರ್ಮತ್ತಡ್ಕ, ಪತ್ರಕರ್ತ ಅಚ್ಯುತ್ತ ಚೇವಾರ್, ಮನು ಪಣಿಕ್ಕರ್, ಕ್ರೀಡಾ ಲೇಖಕ ಜಗದೀಶ್ ಚಂದ್ರ ಅಂಚನ್ ಸೂಪರ್ಪೇಟೆ, ಕುಡಾಲುಮೇರ್ಕಳ ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ನಂಬ್ಯಾರ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಲಕ್ಷ್ಮಣ ಪ್ರಭು ಕುಂಬಳೆ, ಅಖಿಲೇಶ್ ನಗುಮುಗಂ, ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ, ಶಂಕರ್ ಸ್ವಾಮಿಕೃಪಾ, ವಸಂತಕುಮಾರ್ ಸಿ.ಕೆ ಮೊದಲಾದವರು ಉಪಸ್ಥಿತರಿದ್ದರು.
ಸುಬ್ಬಯ್ಯಕಟ್ಟೆ ಕನ್ನಡ ಸಂಘದ ಕಾರ್ಯದರ್ಶಿ ಎಸ್.ಕೆ.ಬಾಲಕೃಷ್ಣ ಸ್ವಾಗತಿಸಿ, ಅಶೋಕ್ ಭಂಡಾರಿ ವಂದಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಖಜಾಂಜಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲಿಗೆ ಶಾಸಕಿ, ಕರ್ನಾಟಕ ಸಂಸ್ಕೃತಿ ಇಲಾಖೆಯ ಸಂಸದೀಯ ಸಚಿವೆ ಶಕುಂತಲಾ ಶೆಟ್ಟಿ ಜಾನಪದ ನೃತ್ಯ ವೈಭವ ಮತ್ತು ಜಾನಪದ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಯಕ್ಷಗಾನ, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ ಮೊದಲಾದ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನಗಳ ಬೃಹತ್ ಮೆರವಣಿಗೆ ಸುಬ್ಬಯ್ಯಕಟ್ಟೆಯಿಂದ ಕುಡಾಲು ಮೇರ್ಕಳಕ್ಕೆ ಆಗಮಿಸಿತು. ಬಳಿಕ ಮೈಸೂರಿನ ಕುಮಾರ್ ಮತ್ತು ತಂಡದಿಂದ ಡೊಳ್ಳು ಕುಣಿತ, ತುಮಕೂರಿನ ಸಿ.ಎಸ್ ಲೋಕೇಶ್ ತಂಡದವರಿಂದ ವೀರಗಾಸೆ, ಮನು ಪಣಿಕ್ಕರ್ ತಂಡದವರಿಂದ ಚೆಂಡೆ ಮೇಳ, ಚಾಮರಾಜನಗರದ ಕುಮಾರ್ ತಂಡದವರಿಂದ ಕಂಸಾಳೆ, ಕೃಷ್ಣ ಮಾಸ್ತರ್ ಪೆಲ್ತಾಜೆ ತಂಡದವರಿಂದ ಬಾಳ್ಯ ಸಾಂತು, ವಿರಾಜಪೇಟೆಯ ಗೌರಿ ನಂಜಪ್ಪ ತಂಡದವರಿಂದ ಕತ್ತಿಯಾಟು, ಮಂಡತವ್ವ ತಂಡ ಬಕ್ಕೆ ಸೊಡ್ಲೂರು ಇವರಿಂದ ಉಮ್ಮತ್ತಾಟು, ಕೋಲಾಟ, ಶಂಕರ ಸ್ವಾಮಿಕೃಪಾ ತಂಡದವರಿಂದ ಆದಿವಾಸಿ ನೃತ್ಯ, ಎಲೆನೃತ್ಯ,ಮೀಡಿಯಾ ಕ್ಲಾಸಿಕಲ್ಸ್ ತಂಡದಿಂದ ಸಿಂಗಾರಿ ಮೇಳ,ಮಾಟೂರು ಕುಮಾರನ್ ಮತ್ತು ತಂಡದವರಿಂದ ಮಾರಿಯಾಟಂ,ರಾಜರಾಜೇಶ್ವರಿ ವ್ಯಾಯಾಮ ಶಾಲೆ ಧರ್ಮತ್ತಡ್ಕ ತಂಡದವರ ವಿವಿಧ ಕವಾಯತು, ಬೆಂಕಿಯಾಟಗಳ ಪ್ರದರ್ಶನಗಳು ನಡೆದವು.