ಸೆ.22: ‘ನೇಮೊದ ಬೂಳ್ಯ’ ತುಳು ಚಿತ್ರ ಬಿಡುಗಡೆ
ಮಂಗಳೂರು, ಸೆ.19: ಭೂತಾರಾಧನೆ ಸಂಬಂಧಪಟ್ಟ ಪರತಿ ಮಂಗಣೆ ಪಾಡ್ದನ ಆಧಾರಿತ ‘ನೇಮೊದ ಬೂಳ್ಯ’ ತುಳು ಚಿತ್ರ ಸೆ.22ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಕುದ್ರಾಡಿ ಗುತ್ತು ಶಬರಿ ಚಂದ್ರಶೇಖರ ಮಾಡ ತಿಳಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಂಗಳೂರಿನ ಬಿಗ್ ಸಿನಿಮಾ, ಪಿವಿಆರ್, ಸಿನಿಪೊಲಿಸ್, ಉಡುಪಿಯ ಡಯಾನಾ, ಮೂಡುಬಿದಿರೆಯ ಅಮರಶ್ರೀ, ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನಗೊಳ್ಳಲಿದೆ ಎಂದರು.
ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಶಬರಿ ಚಂದ್ರಶೇಖರ್ ಮಾಡ ಅರ್ಪಿಸುವ ಬಿ.ಕೆ. ಗಂಗಾಧರ ಕಿರೋಡಿಯನ್ ನಿರ್ದೇಶನದ ‘ನೇಮೊದ ಬೂಳ್ಯ’ ಸಿನೆಮಾ 200 ವರ್ಷಗಳ ಹಿಂದೆ ಪುತ್ತೂರಿನ ಬೆಟ್ಟಂಪಾಡಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದ ನಾಟಕವಾಗಿದ್ದು, ಈಗ ಅದನ್ನು ಸಿನೆಮಾವನ್ನಾಗಿ ಪರಿವರ್ತಿಸಲಾಗಿದೆ. ಸಿನೆಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಮೆಚ್ಚುಗೆ ಗಳಿಸಿದೆ. ‘ಪರತಿ ಮಂಗಣೆ’ ಪಾಡ್ದನವನ್ನು ಸಿನೆಮಾ ರೂಪಕ್ಕೆ ಇಳಿಸಲಾಗಿದೆ ಎಂದರು.
ವಿ. ಮನೋಹರ್ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಉಮಾಪತಿ ಬೆಂಗಳೂರು ಕ್ಯಾಮರಾ, ಪ್ರಕಾಶ್ ಕಾರಿಂಜ ಸಂಕಲನವಿದ್ದು, ಪ್ರತಾಪ್ ಸಾಲ್ಯಾನ್ ಕದ್ರಿ ಸಹನಿರ್ದೇಶಕರಾಗಿದ್ದಾರೆ. ನೃತ್ಯ ಮದನ್ ಹರಿಣಿ, ಪ್ರೀತಂ ಶೆಟ್ಟಿ, ಕಿರುತೆರೆ ನಟಿ ರಜನಿ, ಪ್ರದೀಪ್ ಚಂದ್ರ ಮುಖ್ಯ ಪಾತ್ರದಲ್ಲಿದ್ದು, ಮನೋಹರ್ ವಿಠಲ್, ರಮೇಶ್ ಭಟ್, ಮಂಡ್ಯ ರಮೇಶ್, ರಘುರಾಮ ಶೆಟ್ಟಿ, ರಮೇಶ್ ಕಲ್ಲಡ್ಕ, ಆರ್, ಎನ್ ಶೆಟ್ಟಿ, ಕಳವಾರ್, ಮೋಹನ್ ಬೋಳಾರ್, ಎನ್.ಎಸ್. ರೈ, ರಾಧಾಕೃಷ್ಣ ಕುಂಬ್ಳೆ, ತಾರಾನಾಥ ಉರ್ವ, ಸುರೇಶ್ ನಿಟ್ಟೆ, ಸುರೇಶ್ ದೇವಾಡಿಗ, ಜಯಶೀಲ ಮರೋಳಿ, ವೀಣಾ ಜಯಂತ್, ರತ್ನಾವತಿ ಜೆ. ಬೈಕಾಡಿ, ಪವಿತ್ರ ಶೆಟ್ಟಿ ಮೊದಲಾದವರು ಸಿನೆಮಾದಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟಿ ರತ್ನಾವತಿ ಜೆ. ಬೈಕಾಡಿ, ನಿರ್ದೇಶಕ ಬಿ.ಕೆ. ಗಂಗಾಧರ ಕಿರೋಡಿಯನ್, ನಟರಾದ ಪ್ರೀತಮ್ ಶೆಟ್ಟಿ ಮತ್ತು ಆರ್.ಎನ್. ಶೆಟ್ಟಿ ಕಳವಾರು ಉಪಸ್ಥಿತರಿದ್ದರು.