ಯುಬಿಎಂಸಿ ಬ್ರಾಹ್ಮಣರ ಹೆಣ್ಣು ಮಕ್ಕಳ ಶಾಲೆ ಇದ್ದ ಜಾಗದಲ್ಲಿ ನಿರ್ಮಾಣಗೊಂಡ ಉದ್ದಿಮೆ ತೆರವುಗೊಳಿಸಲು ಮನಪಾ ಆದೇಶ
ಮಂಗಳೂರು, ಸೆ.22: ಮಂಗಳೂರು ಕಸಬಾ ಬಜಾರ್ನಲ್ಲಿರುವ ಬ್ರಾಹ್ಮಣರ ಹೆಣ್ಣು ಮಕ್ಕಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನ ಮತ್ತು ಶಾಲೆಯ ಪ್ರದೇಶದಲ್ಲಿ ರೆಸ್ಟೋರೆಂಟ್ ಒಂದನ್ನು ನಿರ್ಮಿಸಲು ನೀಡಿರುವ ಪರವಾನಿಗೆಯನ್ನು ತಕ್ಷಣ ರದ್ದು ಪಡಿಸಿ ಯಾಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ಮಾನವ ಹಕ್ಕು ಹೋರಾಟಗಾರ ಹನೀಫ್ ಪಾಜಪಳ್ಳ ಅವರ ಆಕ್ಷೇಪದ ಹಿನ್ನೆಲೆಯಲ್ಲಿ ಸದ್ರಿ ಉದ್ದಿಮೆಯನ್ನು ಮಚ್ಚಲು ಮಂಗಳೂರು ಮಹಾನಗರಪಾಲಿಕೆಯ ಅರೋಗ್ಯಾಧಿಕಾರಿ ಸೆ.21ರಂದು 1976ರ ಕರ್ನಾಟಕ ಪೌರ ನಿಗಮ ಅಧಿನಿಯಮ ಪ್ರಕರಣ 353,354,355,356,357,358 ಮತ್ತು 360ರ ಪ್ರಕಾರ ಸದ್ರಿ ಸ್ಥಳದಲ್ಲಿರುವ ಉದ್ದಿಮೆಯನ್ನು ತೆರವುಗೊಳಿಸಲು ನೋಟಿಸು ಜಾರಿಗೊಳಿಸಿದ್ದಾರೆ.
ಈ ಹಿಂದೆ ಹನಿಫ್ ಪಾಜಪಳ್ಳರವರು ಮಾಹಿತಿ ಹಕ್ಕಿನ ಕಾಯಿದೆಯ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆಯಿಂದ ಮಾಹಿತಿ ಪಡೆದು ಶಾಲೆಗೆ ಮೀಸಲಾಗಿದ್ದ ಸ್ಥಳವನ್ನು ರೆಸ್ಟೋರೆಂಟ್ಗೆ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಎಪ್ರಿಲ್ 24ರಂದು ಮನಪಾ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ ಮಾಹಿತಿ ಪಡೆದಿದ್ದಾರೆ. ಆಗ ಮನಪಾ ಅಧಿಕಾರಿಗಳು ನೀಡಿದ ಮಾಹಿತಿ ನೀಡಿದ ಪ್ರಕಾರ ಈ ಸ್ಥಳಕ್ಕೆ ಸಂಬಂಧಿಸಿದಂತೆ ನೀಡಲಾದ ಉದ್ದಿಮೆ ಪರವಾನಿಗೆಯನ್ನು 2016-17ನೆ ಸಾಲಿಗೆ ರದ್ದು ಪಡಿಸಲಾಗಿದೆ.
ಮುಚ್ಚಿರುವ ಶಾಲೆಯ ಆಸ್ತಿಯನ್ನು ಶಿಕ್ಷಣ ಇಲಾಖೆಗೆ ಒಪ್ಪಿಸಬೇಕಾಗಿರುವುದರಿಂದ ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಹಾನಗರ ಪಾಲಿಕೆಗೆ ಆದೇಶ ಬಂದಿರುವುದಿಲ್ಲ ಎನ್ನುವ ಉತ್ತರ ನೀಡಲಾಗಿತ್ತು. ಬಳಿಕ ಶಿಕ್ಷಣ ಇಲಾಖೆ ಈ ಬಗ್ಗೆ ಆದೇಶ ನೀಡಿತ್ತು. ಇದೀಗ ಮಹಾನಗರ ಪಾಲಿಕೆ ಉದ್ದಿಮೆದಾರರಿಗೆ ತೆರವು ಮಾಡಲು ಆದೇಶಿಸಿದೆ.