ಪರಿಶಿಷ್ಟರ ಜಾಗ ಅತಿಕ್ರಮಿಸಿದವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಮಂಗಳೂರು, ಸೆ.23: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಡಿಸಿ ಮನ್ನಾ ಭೂಮಿ ಸೇರಿದಂತೆ ಇತರ ಭೂಮಿಯನ್ನು ಅತಿಕ್ರಮಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ದಂಧೆ ನಡೆಸುತ್ತಿರುವ ಪ್ರಕರಣಗಳ ಬಗ್ಗೆ ದೂರು ಬಂದಿದ್ದು, ಯಾರೇ ಆಗಿದ್ದರೂ ಇಂತಹ ಅಕ್ರಮಗಳನ್ನು ನಡೆಸಿದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ತಹಶೀಲ್ದಾರ್ (ಪ್ರಭಾರ) ಗುರುಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ಮಿನಿ ವಿಧಾನಸೌಧದ ತಾಲೂಕು ಕಚೇರಿಯಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆ ಆಲಿಕೆ ಸಭೆಯಲ್ಲಿ ಅವರು ದಲಿತ ಮುಖಂರೊಬ್ಬರ ದೂರಿಗೆ ಪ್ರತಿಕ್ರಿಯಿಸಿದರು.
ದೇರೆಬೈಲ್ನಲ್ಲಿ ದಲಿತರಿಗೆ ಮಂಜೂರಾಗಿದ್ದ ಡಿಸಿ ಮನ್ನಾ ಭೂಮಿಯಲ್ಲಿ ದಲಿತೇತರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಫ್ಲಾಟ್ಗಳನ್ನು ಕಟ್ಟಿ ಅದನ್ನು ಬಾಡಿಗೆ ರೂಪದಲ್ಲಿ ನೀಡಿರುವುದಲ್ಲದೆ, ಕೆಲವರು ಮನೆಗಳನ್ನು ನಿರ್ಮಿಸಿ ಅದನ್ನು ಮಾರಾಟ ಮಾಡುವ ವ್ಯವಹಾರವನ್ನೂ ನಡೆಸುತ್ತಿದ್ದಾರೆ ಎಂದು ದಲಿತ ಮುಖಂಡರೊಬ್ಬರು ಸಭೆಯಲ್ಲಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗುರುಪ್ರಸಾದ್, ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನಿರ್ದಿಷ್ಠ ಪ್ರಕರಣಗಳ ಬಗ್ಗೆ ಮಾಹಿತಿ ಒದಗಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ಪಿಟಿಸಿಎಲ್ ಕಾಯ್ದೆಯಡಿ ಅತಿಕ್ರಮಣವನ್ನು ರದ್ದುಪಡಿಸಿ ಅಂತಹವರ ವಿರುದ್ಧ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ಅಭಿವೃದ್ಧಿಗೆ ಸಂಬಂಧಿಸಿ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಸಭೆ
ದಲಿತ ಸಮುದಾಯದವರ ವಿವಿಧ ರೀತಿಯ ಮೂಲಭೂತ ಸೌಲಭ್ಯಗಳು ಸೇರಿದಂತೆ ಅಭಿವೃದ್ಧಿ ಕುರಿತಂತೆ ತಾಲೂಕು ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಪಿಡಿಒಗಳ ಉಪಸ್ಥಿತಿಯಲ್ಲಿ ಪ್ರತ್ಯೇಕ ಸಭೆಯನ್ನು ಕರೆದು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಗುರುಪ್ರಸಾದ್ ಸಭೆಯಲ್ಲಿ ದಲಿತ ನಾಯಕರಿಗೆ ಭರವಸೆ ನೀಡಿದರು.
ಅನುದಾನ ದುರ್ಬಳಕೆ ಆಗಿದ್ದಲ್ಲಿ ಅನುಷ್ಠಾನ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ಶೇ. 25ರಷ್ಟನ್ನು ದಲಿತರ ಮೂಲಭೂತ ಸೌಕರ್ಯಗಳು, ಅಭಿವೃದ್ದಿಗೆ ಉಪಯೋಗಿಸಬೇಕೆಂಬ ನಿಯಮವಿದ್ದರೂ ಹಲವಾರು ಕಡೆ ಅದನ್ನು ಉಲ್ಲಂಘಿಸಲಾಗುತ್ತಿದೆ ಎಂದು ದಲಿತ ನಾಯಕರೊಬ್ಬರು ಸಭೆಯ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಗುರುಪ್ರಸಾದ್, ಶಾಸಕರ ಪ್ರದೇಶಾಭಿವೃದ್ದಿ ನಿಧಿ ಬಳಕೆಗೆ ನಿಯಮವೇ ಇದೆ. ಈ ನಿಯಮವನ್ನು ಉಲ್ಲಂಘಿಸಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆದರೂ ಸಂಬಂಧಪಟ್ಟ ಅನುಷ್ಠಾನ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಮನವಿ
ಬಜ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಮನವಿ ನೀಡಲಾಗಿದೆ. ಎಂಆರ್ಪಿಎಲ್, ಎಂಸಿಎಫ್ನಂತಹ ಕಂಪನಿಗಳು ಇರುವಾಗ ಅಲ್ಲಿನ ಆಸ್ಪತ್ರೆ ಇನ್ನೂ ಮೇಲ್ದರ್ಜೆಗೇರಿಸದಿರುವುದು ಬೇಸರದ ಸಂಗತಿ ಎಂದು ದಲಿ ನಾಯಕ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ನವೀನ್, ಅಲ್ಲಿಗೆ ಹೊಸ ಕಟ್ಟಡ ಮಂಜೂರು ಆಗಿದೆ. ಸರಕಾರ ಹಂತದಲ್ಲಿ ಪರಿಶೀಲನೆಯಲ್ಲಿದೆ. ಮೇಲ್ದರ್ಜೆಗೇರಿಸಲು ಸುಮಾರು ಐದು ಕೋಟಿ ರೂ. ಅಗತ್ಯವಿದ್ದು, ಪ್ರಸ್ತುತ 1.30 ಕೋಟಿ ರೂ. ಮಂಜೂರಾಗಿದೆ ಎಂದರು.
ಡಿಸಿ ಮನ್ನಾ ಭೂಮಿ ಕುರಿತಂತೆ ವಿಶೇಷ ಸಭೆ
ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತಂತೆ ಈಗಾಗಲೇ ಸಚಿವರು ಹಾಗೂ ಜಿಲ್ಲಾಧಿಕಾರಿ ಕೂಡಾ ಆದೇಶ ನೀಡಿದ್ದು, ಪ್ರಕ್ರಿಯೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಲಭ್ಯ ಇರುವ ಜಾಗವನ್ನು ಅರ್ಹರಿಗೆ ಡಿಸೆಂಬರ್ ಮಾಸಾಂತ್ಯದೊಳಗೆ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪ್ರಭಾರ ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದರು.
ಮಂಗಳೂರು ತಾಲೂಕಿನಲ್ಲಿ ಲಭ್ಯ ಇರುವ ಭೂಮಿಯನ್ನು ತಾನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಿದ್ದೇನೆ. ಕೆಲ ಗ್ರಾಮಗಳಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭೂಮಿ ಕೊರತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಮೀಪದ ಗ್ರಾಮಗಳಲ್ಲಿ ಅವರಿಗೆ ಭೂಮಿ ಒದಗಿಸುವ ಬಗ್ಗೆಯೂ ಚಿಂತನೆ ಇದೆ. ಮಾತ್ರವಲ್ಲದೆ ಪ್ರತಿಯೊಬ್ಬರಿಗೆ ತಲಾ 20 ಸೆಂಟ್ಸ್ ಭೂಮಿಯಂತೆ ಹಂಚಿಕೆ ಮಾಡುವ ಮೂಲಕ ಎಲ್ಲರಿಗೂ ಭೂಮಿ ಸಿಗುವಂತೆಯೂ ಕ್ರಮ ವಹಿಸಲಾಗುವುದು ಎಂದು ಅವರು ಸಲಹೆ ನೀಡಿದರು. ಇದಕ್ಕಾಗಿ ಇಬ್ಬರು ದಲಿತ ಮುಖಂಡರೂ ಒಳಗೊಂಡಂತೆ ಪ್ರತ್ಯೇಕ ಸಮಿತಿ ಮಾಡಲಾಗುವುದು ಎಂದು ಅವರು ಹೇಳಿದರು.