ಕುದ್ರೋಳಿ ದೇವಸ್ಥಾನದಲ್ಲಿ ಪೂಜಾರಿ - ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ
ಕಲ್ಲಡ್ಕ ಶಾಲೆಗೆ ಅನುದಾನ ನಿಲ್ಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಪೂಜಾರಿ
# ಕಲ್ಲಡ್ಕ ದಂಪತಿಯಿಂದ ಪೂಜಾರಿಗೆ ಶ್ಲಾಘನೆ
# "ಹೊಸ ಚೈತನ್ಯ" ಪಡೆದು ಹಿಂದಿರುಗಿದ ಭಟ್
ಮಂಗಳೂರು, ಸೆ. 29: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಗುರುವಾರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವಗಳ ಕಾರ್ಯಕ್ರಮಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ , ಪತ್ನಿ ಕಮಲಾ ಭಟ್ ಹಾಗೂ ಇತರ ಹಲವರೊಂದಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಜನಾರ್ಧನ ಪೂಜಾರಿ ಉಪಸ್ಥಿತರಿದ್ದರು. ಪೂಜಾರಿ ಅವರನ್ನು ಪ್ರಭಾಕರ್ ಭಟ್ ಭೇಟಿಯಾಗಿ ಸಂತೋಷ ವಿನಿಮಯ ಮಾಡಿಕೊಂಡರು.
ಕಲ್ಲಡ್ಕ ಶ್ರೀ ರಾಮ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಅನುದಾನ ನಿಲ್ಲಿಸಿ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಿದೆ. ಈ ಬಗ್ಗೆ ನಾನು ಸಾರ್ವಜನಿಕವಾಗಿ ಖಂಡಿಸಿದ್ದೇನೆ ಎಂದು ಪೂಜಾರಿ ಅವರು ಈ ಸಂದರ್ಭದಲ್ಲಿ ಪ್ರಭಾಕರ ಭಟ್ಟರಲ್ಲಿ ವಿಷಾದ ವ್ಯಕ್ತಪಡಿಸಿದರು. "ದೈರ್ಯವಾಗಿ ಹೇಳಿದ್ದು ನೀವು ಮಾತ್ರ" ಎಂದು ಕಮಲಾ ಭಟ್ ಪೂಜಾರಿಯವರನ್ನು ಶ್ಲಾಘಿಸಿದರು.
ಬಳಿಕ ಮಾತನಾಡಿದ ಪ್ರಭಾಕರ ಭಟ್ ಅವರು ಪೂಜಾರಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಹೊಸ ಚೈತನ್ಯ ಸಿಗುತ್ತದೆ. ಸರ್ಕಾರ ವಿಫಲವಾಗಿದ್ದರೂ ಪೂಜಾರಿಯವರು ಸಂಭ್ರಮದಿಂದ ದಸರಾ ಆಚರಿಸುತ್ತಿದ್ದಾರೆ ಎಂದು ಹೇಳಿದರು.
ನಂತರ ಸಂಸದ ನಳಿನ್ ಕುಮಾರ್ ಕಟೀಲ್ ದೇವಾಲಯಕ್ಕೆ ಬಂದಿದ್ದು, ಅವರೂ ಜನಾರ್ದನ ಪೂಜಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.