ಸ್ವಚ್ಛತಾ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳೋಣ: ಮುಹಮ್ಮದ್ ಮೋನು
ನಾಟೆಕಲ್ನಿಂದ ಕುತ್ತಾರ್ವರೆಗೆ ಬ್ಯಾರೀಸ್ನಿಂದ ಸ್ವಚ್ಛತಾ ಅಭಿಯಾನ
ಕೊಣಾಜೆ, ಅ. 15: ಸ್ವಚ್ಛತೆಯ ಬಗ್ಗೆ ಕೇವಲ ಸರಕಾರ ಮಾತ್ರ ತೊಡಗಿಸಿಕೊಂಡರೆ ಅದು ಪರಿಪೂರ್ಣವಾಗಲು ಸಾಧ್ಯವಿಲ್ಲ. ಪ್ರಾಮಾಣಿಕ ಹಾಗೂ ಸೇವಾ ಮನೋಭಾವದಿಂದ ಜನರು ಹುಮ್ಮಸ್ಸಿನಿಂದ ಇದರಲ್ಲಿ ತೊಡಗಿಸಿಕೊಂಡರೆ ಸ್ವಚ್ಛತಾ ಅಭಿಯಾನ ದೇಶದೆಲ್ಲೆಡೆ ಯಶಸ್ವಿಯಾಗಲು ಸಾಧ್ಯ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಹೇಳಿದರು.
ಅವರು ಇನೋಳಿಯ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಆಶ್ರಯದಲ್ಲಿ 'ಮಂಗಳೂರು ಸ್ವಚ್ಛತಾ ಅಭಿಯಾನ-2017' ಅಂಗವಾಗಿ ರವಿವಾರ ನಾಟೆಕಲ್ನಿಂದ ಕುತ್ತಾರ್ನ ವರೆಗೆ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯ ಅಂಗವಾಗಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಸ್ವಚ್ಛತಾ ಅಭಿಯಾನದಂತಹ ಉತ್ತಮ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದೆ. ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ತೊಡಗಿಸಿಕೊಂಡು ಉತ್ತಮ ಮಾದರಿ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಿಸಲು ಪಣತೊಡಬೇಕಾಗಿದೆ ಎಂದರು.
ಬ್ಯಾರೀಸ್ ಕಾಲೇಜಿನ ಪ್ರಾಂಶುಪಾಲ ಡಾ. ಆ್ಯಂಟನಿ ಎ.ಜೆ. ಅವರು ಮಾತನಾಡಿ, ಮಂಗಳೂರು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಗಮನ ಸೆಳೆಯುವ ಕ್ಷೇತ್ರವಾಗಿದೆ. ಅದೇ ರೀತಿ ಇದೀಗ ಇಂತಹ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಜನರು ತೊಡಗಿಸಿಕೊಂಡಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಇನ್ನಷ್ಟು ಯುವ ಸಮುದಾಯ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರವೂಫ್, ಬ್ಯಾರೀಸ್ ಕಾಲೇಜಿನ ಹಿರಿಯ ಸಲಹೆಗಾರ ಡಾ.ಎಸ್.ಕೆ.ರಾಯ್ಕರ್, ಆಡಳಿತ ವಿಭಾಗದ ಪ್ರೊ.ಮುಸ್ತಫಾ ಬಸ್ತಿಕೋಡಿ, ದೈಹಿಕ ನಿರ್ದೇಶಕ ಸಫ್ವಾನ್ ಮೊದಲಾದವರು ಉಪಸ್ಥಿತರಿದ್ದರು.
ನಾಟೆಕಲ್ನಿಂದ ಕುತ್ತಾರ್ ವರೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಬ್ಯಾರೀಸ್ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿದ್ದ ತ್ಯಾಜ್ಯಗಳನ್ನು ಶುಚಿಗೊಳಿಸಿ ಆ ಪ್ರದೇಶದಲ್ಲಿ ಗಿಡವನ್ನು ನೆಡುವುದರೊಂದಿಗೆ ಜನ ಜಾಗೃತಿಯ ಅಂಗವಾಗಿ ಜಾಗೃತಿ ಬೋರ್ಡ್ಗಳನ್ನು ಅಳವಡಿಸಿದ್ದಾರೆ. ಅಲ್ಲದೆ ರಸ್ತೆಯುದ್ದಕ್ಕೂ ಮೈಕ್ ಮೂಲಕ ಸ್ವಚ್ಛತಾ ಅಭಿಯಾನದ ಸಂದೇಶದೊಂದಿಗೆ ಸ್ವಚ್ಛತೆಯ ಜಾಗೃತಿ ಮೂಡಿಸಿದರು.