ಉರ್ವಸ್ಟೋರ್: ಸಿಪಿಎಂ ಬಹಿರಂಗ ಸಭೆ
ಮಂಗಳೂರು, ಅ.18: ಸಿಪಿಎಂ ಉರ್ವಸ್ಟೋರ್ ಹಾಗೂ ಬೋಳೂರು ಶಾಖೆಗಳ ಸಮ್ಮೇಳನದ ಅಂಗವಾಗಿ ಸಿಪಿಎಂ ಪಕ್ಷದ ಬಹಿರಂಗ ಸಭೆಯು ಉರ್ವಸ್ಟೋರ್ ಜಂಕ್ಷನ್ನಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಚುನಾವಣಾ ಪೂರ್ವದಲ್ಲಿ ದೇಶದ ಜನತೆಗೆ ಭಾರೀ ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿದ ಬಳಿಕ ಜನರ ಹಿತಾಸಕ್ತಿಗಳನ್ನೇ ಮರೆತಿದೆ. ಬೆಲೆಯೇರಿಕೆ ತಡೆಗಟ್ಟುವುದಾಗಿ, ವಿದೇಶದಲ್ಲಿರುವ ಕಪ್ಪುಹಣವನ್ನು ತರುವುದಾಗಿ, ನೇರ ನಗದು ವರ್ಗಾವಣೆ ಯೋಜನೆಯನ್ನು ವಿರೋಧಿಸುವುದಾಗಿ, ಆಧಾರ ಕಡ್ಡಾಯ ಮಾಡುವುದಿಲ್ಲ ಎಂದು ಹೇಳಿದ್ದ ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೇರಿದ ಬಳಿಕ ವಿಪರೀತವಾಗಿ ಬೆಲೆಯೇರಿಕೆ ಮಾಡಿದೆ. ಕಪ್ಪುಹಣದ ಬಗ್ಗೆ ತುಟಿಪಿಟಿಕೆನ್ನುತ್ತಿಲ್ಲ. ಜನ್ಧನ್ ಯೋಜನೆ ಹೆಸರಿನಲ್ಲಿ ಎಲ್ಲರ ಕೈಯಲ್ಲೂ ಬ್ಯಾಂಕ್ ಖಾತೆ ಹೊಂದುವ ಮೂಲಕ ನೇರ ನಗದು ವರ್ಗಾವಣೆ ಯೋಜನೆಗೆ ಚಾಲನೆ ನೀಡಿದೆ. ಆಧಾರ್ ಕಡ್ಡಾಯವೆಂದು ಘೋಷಿಸಿದೆ. ಹೀಗೆ ನಿರಂತರವಾಗಿ ಜನ ಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಜನರ ನಂಬಿಕೆಗೆ ಮೋಸ ಮಾಡುವ ಮೂಲಕ ಜನರೋಧಿಯಾಗಿ ವರ್ತಿಸುತ್ತದೆ ಎಂದರು.
ಸಿಪಿಎಂ ಯುವ ನಾಯಕರಾದ ಪ್ರಶಾಂತ್ ಎಂ.ಬಿ.ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ನಗರ ದಕ್ಷಿಣ ಸಮಿತಿಯ ಸದಸ್ಯ ಸಂತೋಷ್ ಶಕ್ತಿಗನಗರ, ಬೋಳೂರು ಶಾಖಾ ಕಾರ್ಯದರ್ಶಿ ಪ್ರಭಾವತಿ ಬೋಳೂರು, ಮನೋಜ್, ಪ್ರದೀಪ್, ಕಿಶೋರ್ ಉಪಸ್ಥಿತರಿದ್ದರು.