ಕಸ ವಿಲೇವಾರಿ ಘಟಕ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಮನವಿ
ಕೋಲಾರ,ಅ.23: ಕೋಲಾರ ನಗರಸಭೆಯಿಂದ ತಮ್ಮ ಗ್ರಾಮದ ಸಮೀಪ ಕಸ ವಿಲೇವಾರಿ ಘಟಕ ತೆರೆಯಲು ತೀರ್ಮಾನಿಸಿರುವುದಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸುತ್ತಮುತ್ತಲ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು, ಅರಾಭಿಕೊತ್ತನೂರು ಗ್ರಾಮದ ಸರ್ವೆ ನಂ.152ರಲ್ಲಿ 7 ಎಕರೆ ಹಾಗೂ ಗುಡ್ಡನಪುರ ಗ್ರಾಮದ ಸರ್ವೆ ನಂ 30ರಲ್ಲಿ 2.30 ಎಕರೆ ಜಮೀನಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.
ಸದರಿ ಸರ್ವೇ ನಂಬರ್ಗಳ ಜಮೀನು ಸುತ್ತಮುತ್ತಲು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಅತಿ ಸಣ್ಣ ರೈತರು ಜಮೀನುಗಳನ್ನು ಹೊಂದಿದ್ದಾರೆ. ಸದರಿ ರೈತರು ರೇಷ್ಮೆ, ಕುರಿ ಸಾಕಾಣಿಕೆ, ಹೈನುಗಾರಿಕೆ ಅವಲಂಭಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
ಈ ಭಾಗದಲ್ಲಿ ಕಸ ವಿಲೇವಾರಿ ಘಟಕ ತೆರೆಯುವುದರಿಂದ ಪರಿಸರ ಮಾಲಿನ್ಯದಿಂದಾಗಿ ಅನೇಕ ರೋಗ ರುಜಿನಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಜತೆಗೆ ಅಲ್ಲಿ ನೊಣ, ನಾಯಿ, ರಣ ಹದ್ದು, ಹಂದಿಗಳ ಕಾಟವಲ್ಲದೆ ದುರ್ನಾತ ವಾಸನೆ ಸುತ್ತಮುತ್ತ ಹರಡುತ್ತದೆ.
ಈ ಹಿಂದೆ ಡಿ.ಕೆ.ರವಿ ಅವರು ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಪ್ರಯತ್ನಿಸಲಾಗಿ, ಸ್ಥಳೀಯರು, ಸುತ್ತಮುತ್ತಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಕಾರಣ ಪ್ರಕ್ರಿಯೆ ಕೈಬಿಡಲಾಗಿತ್ತು.
ಆದರೆ ಇದೀಗ ಅದೇ ಸ್ಥಳದಲ್ಲಿ ಪುನಃ ಘಟಕ ಆರಂಭಿಸಲು ಮುಂದಾಗುತ್ತಿದ್ದು, ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿ ವತಿಯಿಂದ ಅನುಮತಿ ನೀಡಬಾರದು ಎಂದು ಮನವಿಯಲ್ಲಿ ಅರಾಭಿಕೊತ್ತನೂರು, ಕೆಂದಟ್ಟಿ, ಗುಡ್ಡನಪುರ, ಚಕ್ಕಅಯ್ಯೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರುಗಳು ಒತ್ತಾಯಿಸಿದರು.
ಮನವಿ ಸಲ್ಲಿಸುವಾಗ ಗ್ರಾಮಸ್ಥರಾದ ಇ.ರಾಮೇಗೌಡ, ಬಿ.ನಾರಾಯಣಸ್ವಾಮಿ, ಎಂ.ನಾರಾಯಣಸ್ವಾಮಿ, ಮುನಿಯಪ್ಪ, ಸತೀಶ್, ಎಂ.ರಾಮಪ್ಪ, ಪಿಳ್ಳಬೈಚಪ್ಪ, ಜಿ.ಎಂ.ನಂಜುಂಡಯ್ಯ, ಮಮತ, ಅಪ್ಪಿಗೌಡ ಮತ್ತಿತರರು ಉಪಸ್ಥಿತರಿದ್ದರು.