ಮಸೀದಿ ಆವರಣದಲ್ಲಿ ಕಾಡುಬೆಕ್ಕಿನ ತಲೆ ಪತ್ತೆ
ಮಡಿಕೇರಿ, ನ.17 : ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮದ ತೊಂಭತ್ತುಮನೆ ಎಂಬಲ್ಲಿನ ಮಸೀದಿ ಆವರಣದಲ್ಲಿ ಕಾಡುಬೆಕ್ಕಿನ ತಲೆಯೊಂದು ಪತ್ತೆಯಾಗಿದೆ. ಗ್ರಾಮ ವ್ಯಾಪ್ತಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ತೊಂಭತ್ತುಮನೆಯಲ್ಲಿರುವ ಮಸೀದಿಯ ಆವರಣದ ಒಳಗೆ ಗುರುವಾರ ರಾತ್ರಿ ಕಾಡುಬೆಕ್ಕು ಇಲ್ಲವೆ ಕಬ್ಬೆಕ್ಕಿನ ತಲೆಯನ್ನು ಎಸೆಯಲಾಗಿದೆ. ಶುಕ್ರವಾರ ಬೆಳಗ್ಗಿನ ಜಾವ ಪ್ರಾರ್ಥನೆಗೆಂದು ಬಂದ ಗ್ರಾಮಸ್ಥರು ಇದನ್ನು ಗಮನಿಸಿದ್ದು, ಕೆಲವು ಕಾಲ ಗೊಂದಲ ಸೃಷ್ಟಿಯಾಯಿತು.
ಸ್ಥಳಕ್ಕೆ ಆಗಮಿಸಿದ ಮುಖಂಡರುಗಳಾದ ಖಾಲಿದ್, ಪಿ.ಎಂ.ಅಬ್ದುಲ್ಲ ಮತ್ತು ಖಾಸಿಂ ದುಷ್ಕೃತ್ಯದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದರು.
ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ಬೋಜಪ್ಪ ಹಾಗೂ ಸಿಬ್ಬಂದಿ ತೊಂಭತ್ತುಮನೆ ಮಸೀದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಬಂದೋಬಸ್ತ್ ಮಾಡಲಾಗಿದೆ.
ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.