ದತ್ತಮಾಲಾ ಅಭಿಯಾನದ ಹಿನ್ನಲೆ :ಕೊಟ್ಟಿಗೆಹಾರ ಅಂಗಡಿ, ಹೋಟೆಲ್ ಬಂದ್
ಗಡಿ ಭಾಗದ ಕೊಟ್ಟಿಗೆಹಾರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ: ಸಕ್ತಿವೇಲು
ಬಣಕಲ್, ನ.19: ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತಮಾಲಾ ಅಭಿಯಾನದ ಅಂಗವಾಗಿ ಗಡಿಭಾಗದ ದ.ಕ.ಜಿಲ್ಲೆಯಿಂದ ದತ್ತಮಾಲಾಧಾರಿಗಳು ಚಾರ್ಮಾಡಿ ಘಾಟ್ ಮಾರ್ಗವಾಗಿ ಬರುವುದರಿಂದ ಶಾಂತಿ ಸುವ್ಯವಸ್ಥೆಯ ಹಿನ್ನಲೆಯಲ್ಲಿ ಕೊಟ್ಟಿಗೆಹಾರದ ಎಲ್ಲಾ ಮುಂಗಟ್ಟುಗಳನ್ನು ರವಿವಾರ ಮದ್ಯಾಹ್ನ 3 ಗಂಟೆಯಿಂದ ಸಂಜೆ 9 ಗಂಟೆವರೆಗೆ ಬಂದ್ ಮಾಡಲು ಕೊಟ್ಟಿಗೆಹಾರದ ವರ್ತಕರಿಗೆ ಬಣಕಲ್ ಪಿಎಸೈ ಸಕ್ತಿವೇಲು ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದ.ಕ.ಜಿಲ್ಲೆಯಿಂದ ಒಟ್ಟು 20 ವಾಹನಗಳು ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಶನಿವಾರ ರಾತ್ರಿ ಚಿಕ್ಕಮಗಳೂರಿಗೆ ತೆರಳಿದ್ದು ಅಲ್ಲಿ ಧಾರ್ಮಿಕ ಕೈಕಂರ್ಯ ಮುಗಿಸಿ ರವಿವಾರ ವಾಪಾಸ್ ಸಾಗುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಚಾರ್ಮಾಡಿ ಘಾಟ್ನ ಪ್ರವೇಶ ದ್ವಾರದ ಮಂಗಳೂರು ದರ್ಬಾರ್ ಹೋಟೆಲ್ ಬಳಿ ಪೋಲಿಸ್ ಚೆಕ್ ಪೋಸ್ಟ್ ನಿರ್ಮಿಸಿದ್ದು ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಮುಖ್ಯ ಪೇದೆ ಮೋಹನ್ ಕುಮಾರ್ ಮಾತನಾಡಿ, ಮೂಡಿಗೆರೆ ತಾಲ್ಲೂಕು ವ್ಯಾಪ್ತಿಗೆ ಬರುವ ರಸ್ತೆ ಬದಿಯ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಪೋಲಿಸ್ ಭದ್ರತೆ ಒದಗಿಸಲಾಗಿದೆ.ಸುಮಾರು 304 ದತ್ತಮಾಲಾಧಾರಿಗಳು ದತ್ತಮಾಲಾ ಅಭಿಯಾನಕ್ಕೆ ಕೊಟ್ಟಿಗೆಹಾರ ಕಡೆಯಿಂದ ಶನಿವಾರ ರಾತ್ರಿಯೇ ತೆರಳಿದ್ದಾರೆ.ಸಂಜೆವರೆಗೆ ಕೊಟ್ಟಿಗೆಹಾರ ಸುತ್ತಮುತ್ತ ಶಾಂತಿ ವಾತಾವರಣ ಕಂಡು ಬಂದಿದ್ದು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದರು.