ಕಾಡಾನೆ ಓಡಿಸಲು ಹೋಗಿ ಕಣ್ಣು ಕಳೆದುಕೊಂಡ ರೈತ
ಸಾಂದರ್ಭಿಕ ಚಿತ್ರ
ಮುಂಡಗೋಡ, ನ.23 : ಕಾಡಾನೆಗಳನ್ನುಓಡಿಸಿ ತನ್ನ ಗದ್ದೆಯನ್ನು ರಕ್ಷಿಸಲು ಹೋದ ರೈತನೊಬ್ಬ ಹೊಂಡಕ್ಕೆ ಬಿದ್ದು ಕಣ್ಣು ಕಳೆದುಕೊಂಡ ಘಟನೆ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ನಡೆದಿದೆ.
ಹನುಮಾಪುರ ಗ್ರಾಮದ ಕೆಂಗಪ್ಪ ಗುರಪ್ಪ ಮಹಾರಾಜಪೇಟೆ(55) ಎಂಬವರು ಕಣ್ಣು ಕಳೆದುಕೊಂಡ ರೈತ. ಎಂಟಕ್ಕೂ ಹೆಚ್ಚು ಕಾಡಾನೆಗಳು ರಾತ್ರಿ ಹನುಮಾಪುರ ಗ್ರಾಮದ ಸನಿಹದ ಗದ್ದೆಗೆ ದಾಳಿ ನಡೆಸಿವೆ. ಗ್ರಾಮಸ್ಥರೆಲ್ಲರೂ ಸೇರಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸಲು ಮುಂದಾಗಿದ್ದು, ಈ ಸಂದರ್ಭ ಕಾಡಾನೆಯೊಂದು ತಿರುಗಿ ಜನರತ್ತ ಬಂದಿದೆ. ಕೆಂಗಪ್ಪ ಪ್ರಾಣ ರಕ್ಷಣೆಗೆ ಓಡಿದಾಗ ಅರಣ್ಯದಲ್ಲಿನ ಹೊಂಡಕ್ಕೆ ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಹೊಂಡದಲ್ಲೇ ಒಂದು ರಾತ್ರಿ ಕಳೆದಿದ್ದಾರೆ.
ಮನೆಗೆ ಬಾರದೇ ಇರುವುದರಿಂದ ಮನೆಯವರು ಹುಡುಕಾಟ ನಡೆಸಿದಾಗ ಸಂಜೆ ವೇಳೆ ಹೊಂಡದಲ್ಲಿ ಕೆಂಗಪ್ಪ ಪತ್ತೆಯಾಗಿದ್ದಾರೆ. ಅವರ ಕಣ್ಣಿಗೆ ಕಟ್ಟಿಗೆ ತುಂಡು ತಾಗಿ ಗಾಯವಾಗಿತ್ತು. ತಕ್ಷಣವೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣಿಗೆ ಬಲವಾದ ಗಾಯವಾಗಿರುವುದರಿಂದ ದೃಷ್ಟಿ ನಷ್ಟವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಾತೂರ ಆರ್ ಎಫ್ ಒ ಮಹೇಶ್ ಹಾಗೂ ಉಪವಲಯ ಅರಣ್ಯಾಧಿಕಾರಿ ನಾಗರಾಜ್ ಕಲಾಲ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.