ಪ್ರಕರಣ ಹಿಂಪಡೆಯಲು ಪ್ರಭಾವಿ ಸಚಿವರಿಂದ ಒತ್ತಡ: ಬಿಜೆಪಿ ಆರೋಪ
ಧಾರವಾಡ ಹೆಬ್ಬಳ್ಳಿ ಪಂಚಾಯತ್ ಸದಸ್ಯನ ಹತ್ಯೆ ಪ್ರಕರಣ
ಬೆಳಗಾವಿ, ನ. 23: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ಗೌಡ ಹತ್ಯೆ ಪ್ರಕರಣ ಹಿಂಪಡೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಒತ್ತಡ ಹೇರಿದ್ದಾರೆಂಬ ಆರೋಪವಿದ್ದು, ಈ ಬಗ್ಗೆ ರಾಜ್ಯ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಸದಸ್ಯ ವಿಶ್ವೇಶ್ವರ ಹಗಡೆ ಕಾಗೇರಿ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ನಿಲುವಳಿ ಸೂಚನೆಯಡಿ ವಿಷಯ ಪೂರ್ವಭಾವಿ ಪ್ರಸ್ತಾಪ ಮಾಡಿದ ಅವರು, ಈ ಸಂಬಂಧ ಸುದ್ದಿ ಖಾಸಗಿ ಸುದ್ದಿ ವಾಹಿನಿಯಲ್ಲಿ ವರದಿ ಬಿತ್ತರ ಆಗುತ್ತಿದೆ. ಈ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಮತ್ತೋರ್ವ ಸದಸ್ಯ ವಿ.ಸುನೀಲ್ ಕುಮಾರ್, ಎಲ್ಲ ಪ್ರಕರಣಗಳನ್ನು ರಾಜ್ಯ ಸರಕಾರ ಮುಚ್ಚಿ ಹಾಕುವ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ, ಸುದ್ದಿ ಮಾಧ್ಯಮಗಳ ವರದಿಗಳನ್ನು ಆಧರಿಸಿ ವಿಧಾನಸಭೆಯಲ್ಲಿ ಯಾವುದೇ ವಿಚಾರ ಚರ್ಚೆ ಸರಿಯಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳು ಅಗತ್ಯ. ಆದರೂ, ಈ ವಿಷಯದ ಬಗ್ಗೆ ನಿಯಮ 69ರಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ ಬಳಿಕ ಆ ವಿಷಯ ಚರ್ಚೆಗೆ ಇತೀಶ್ರೀ ಹಾಡಲಾಯಿತು.