ಪರಿಹಾರ ಪಾವತಿ ಆದೇಶ ಉಲ್ಲಂಘನೆ: ಸಾರಿಗೆ ಬಸ್ ವಶಕ್ಕೆ ಪಡೆದ ನ್ಯಾಯಾಲಯ
ಕೆ.ಆರ್.ಪೇಟೆ, ನ.23: ಅಪಘಾತ ಪ್ರಕರಣ ಸಂಬಂಧ ನ್ಯಾಯಾಲಯ ನೀಡಿದ್ದ ತೀರ್ಪಿನ ಪ್ರಕಾರ ಪರಿಹಾರ ಹಣ ಪಾವತಿಸದ ಹಿನ್ನೆಲೆಯಲ್ಲಿ ಗುರುವಾರ ಸಾರಿಗೆ ಸಂಸ್ಥೆಯ ಐರಾವತ ಬಸ್ಸನ್ನು ನ್ಯಾಯಾಲಯ ವಶಕ್ಕೆ ಪಡೆದಿದೆ.
ಮೈಸೂರಿನಿಂದ ಮುಂಬೈಗೆ ತೆರಳುತ್ತಿದ್ದ ಬಸ್ಸನ್ನು ವಶಕ್ಕೆ ಪಡೆದು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಯಿತು. ಇದರಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಮಾಡಲಾಯಿತು.
2016ರಲ್ಲಿ ಸಾರಿಗೆ ಬಸ್ ಢಿಕ್ಕಿಯಾಗಿ ಗೋಪಾಲ್ ಎಂಬ ಬೈಕ್ ಸವಾರ ಸಾವನ್ನಪ್ಪಿದ್ದು, ಈ ಸಂಬಂಧ ಗೋಪಾಲ್ ಕುಟುಂಬದವರು ನ್ಯಾಯಾಲಯದಲ್ಲಿ ಪರಿಹಾರಕ್ಕೆ ದಾವೆ ಹೂಡಿದ್ದರು. 16.38 ಲಕ್ಷ ರೂ. ಪರಿಹಾರ ಪಾವತಿಸಲು ಕಳೆದ ಮೇ ತಿಂಗಳಲ್ಲಿ ನ್ಯಾಯಾಲಯ ಆದೇಶಿಸಿತ್ತು.
ಆದರೆ, ನ್ಯಾಯಾಲಯದ ಆದೇಶವನ್ನು ಸಾರಿಗೆ ಸಂಸ್ಥೆ ಪಾಲಿಸಿರಲಿಲ್ಲ. ಗೋಪಾಲ್ ಕುಟುಂಬದವರು ಮತ್ತೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಗುರುಪ್ರಸಾದ್ ಕಾರಂತ್ ಅವರ ಆದೇಶದಂತೆ ಬಸ್ಸನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
Next Story