ಭ್ರಷ್ಟ ವ್ಯವಸ್ಥೆ ವಿರುದ್ಧ ಜನ ಜಾಗೃತರಾಗಬೇಕು: ಗೋಪಾಲ್ಜೀ
ಮಡಿಕೇರಿ, ನ.23: ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ಜಾಗೃತರಾಗಿ ಸ್ವಯಂ ನಿಯಂತ್ರಣಕ್ಕೆ ಮುಂದಾದಾಗ ಮಾತ್ರ ದೇಶದ ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಲು ಸಾಧ್ಯವೆಂದು ರಾಷ್ಟ್ರೀಯ ಪ್ರಜಾ ಪರಿವರ್ತನಾ ವೇದಿಕೆಯ ಅಧ್ಯಕ್ಷಬಿ. ಗೋಪಾಲ್ಜೀ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲ ಭವನದಲ್ಲಿ ನಡೆದ ಪ್ರಜಾ ಪರಿವರ್ತನಾ ವೇದಿಕೆಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಚಿಂತನಾ ಸಭೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ದೇಶದ ಜನರಿಗೆ ಮತದಾನದ ಹಕ್ಕು ನೀಡಿದ್ದು, ಈ ಹಕ್ಕು ಸಮರ್ಪಕವಾಗಿ ಬಳಕೆಯಾಗಬೇಕಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಪ್ರತಿ ಚುನಾವಣೆಯಲ್ಲಿ ಉಳ್ಳವರು ನೋಟುಗಳನ್ನು ನೀಡಿ ಬಡವರಿಂದ, ಜನಸಾಮಾನ್ಯರಿಂದ ಓಟು ಗಿಟ್ಟಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವ ಮೂಲಕ ಸಮಾನತೆಗಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ರಾಜ್ಯ ಖಜಾಂಚಿಪ್ರೊ.ಚಂದ್ರಕಾಂತ್ ಮಾತನಾಡಿ, ಪ್ರಜಾಪರಿವರ್ತನೆ ಎನ್ನುವುದು ಸಮಾಜದ ಪರಿವರ್ತನೆಯಾಗಿದೆ. ಆ ಮೂಲಕ ಸಮಾಜದ ಬದಲಾವಣೆ ಮಾಡುವಲ್ಲಿ ಪ್ರಜಾಪರಿರ್ವನೆ ವೇದಿಕೆ ಪ್ರಯತ್ನ ಮಾಡಲಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಡಾ. ಸಯ್ಯದ್ ರೋಷನ್ ಮುಲ್ಲಾ ಮಾತನಾಡಿ, ಸಂವಿಧಾನದ ಮೂಲಕ ಬರಬೇಕಾದ ಬದಲಾವಣೆ ಇಂದು ಕಾಣುತ್ತಿಲ್ಲ. ಜಾತಿ ವ್ಯವಸ್ಥೆ ಬೇರು ಸಹಿತ ತೊಲಗಬೇಕಾದರೆ ದೇಶದಲ್ಲಿ ರಾಜಕೀಯ ಹಾಗೂ ಜಾತಿ ವ್ಯವಸ್ಥೆಯನ್ನು ಕಿತ್ತುಹಾಕಬೇಕಿದೆ. ಜಾತಿ ವ್ಯವಸ್ಥೆಯಿಂದ ಅಮಾನವೀಯ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿದ್ದು, ಜನರು ಜಾಗೃತರಾಗಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಜಾ ಪರಿವರ್ತನ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್, ಮೈಸೂರಿನ ಜಿಲ್ಲಾಧ್ಯಕ್ಷರಾದ ಸತೀಶ್, ಜೆ.ಡಿ.ಎಸ್ ಜಿಲ್ಲಾ ವಕ್ತಾರ ಭರತ್ ಕುಮಾರ್, ಪದಾಧಿಕಾರಿಗಳಾದ ಎಚ್.ಎಸ್.ಮತ್ತಪ್ಪ, ಬಿ.ಎ. ಗಣೇಶ್, ಹೊನ್ನಪ್ಪ, ಹೆಚ್.ಟಿ.ಭೋಜ, ಕೆ.ವಿ.ಸುನೀಲ್ ಕುಮಾರ್, ಬಿ.ಕೆ ವಿಠಲ್, ಶಿವಪ್ಪ ಬೆಟ್ಟಗೇರಿ, ರಾಮ.ಜಿ, ಶಿವಪ್ಪ ಬೊಯಿಕೇರಿ, ಗುರುವಪ್ಪ ಮೂರ್ನಾಡು, ಸುಂದರ, ಆರ್ಮುಗಂ, ಗುರುವಪ್ಪ ಕಡಗದಾಳು ಮತ್ತಿತರರು ಉಪಸ್ಥಿತರಿದ್ದರು.