ಸಮಾನತೆ ಸಂವಿಧಾನದ ಆಶಯ: ನ್ಯಾ. ಸುನೀತಾ
ಸಂವಿಧಾನ ದಿನಾಚರಣೆ
ಶಿರಸಿ, ನ.27: ಭಾರತೀಯ ಸಂವಿಧಾನದ ಮೂಲ ಆಶಯವಾದ ಜಾತ್ಯಾತೀತ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ಲಿಂಗ, ಧರ್ಮದ ಭೇದಭಾವವಿಲ್ಲದೇ ಒಗ್ಗಟ್ಟಿನ ನೀತಿಯನ್ನು ನಾವೆಲ್ಲರೂ ಅನುಸರಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಕರೆ ನೀಡಿದ್ದಾರೆ.
ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಶಿರಸಿ ಇದರ ಸಂಯುಕ್ತ ಆಶ್ರಯದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾನತೆ, ಜನತಂತ್ರ ನೀತಿಯನ್ನು ಪ್ರಸಾರ ಮಾಡಬೇಕು. ದೇಶದಲ್ಲಿನ ಯಾವುದೇ ಕಾನೂನು ಸಂವಿಧಾನದ ಮೂಲ ತತ್ವದ ಅಡಿಯಲ್ಲಿ ರಚಿತಗೊಳ್ಳುವುದರಿಂದ ಸಂವಿಧಾನವನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ನ್ಯಾಯಾಧೀಶ ನರೇಂದ್ರ ಬಿ.ಆರ್.ಮಾತನಾಡಿ, ಸಂವಿಧಾನಾತ್ಮಕ ಹಕ್ಕನ್ನು ಪಡೆದುಕೊಳ್ಳುವ ಜೊತೆಗೆ ಕರ್ತವ್ಯವನ್ನು ಪ್ರತಿಯೊಬ್ಬರು ಪಾಲಿಸಬೇಕು. ಭಾರತದ ಪ್ರತಿಯೊಬ್ಬ ಪ್ರಜೆಯು ಸಂವಿಧಾನಾತ್ಮಕವಾಗಿ ಹಕ್ಕುಗಳನ್ನು ಪಡೆಯುವುದು ಗತ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಂಕರ ರೆಡ್ಡಿ, ಮಾರಿಕಾಂಭಾ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಆರತಿ ಭಟ್ಟ, ಭವ್ಯಾ ಭಟ್ಟ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಕೀಲ ಶಿವರಾಯ ದೇಸಾಯಿ ಉಪನ್ಯಾಸ ನೀಡಿದರು. ನಾಗಶ್ರೀ ಭಟ್ಟ ಸ್ವಾಗತ ಗೀತೆ ಹಾಡಿದರು. ಸ್ವಾಗತ ಭಾಷಣ ಹಾಗೂ ನಿರ್ವಹಣೆ ಸಂಘದ ಕಾರ್ಯದರ್ಶಿ ಆರ್.ಆರ್.ಹೆಗಡೆ ಮಾಡಿದರು. ಇನಾಮಧಾರ ವಂದಿಸಿದರು.