ತುಮಕೂರು : ಲೋಕೋಪಯೋಗಿ ಇಲಾಖೆ ಎಇಇ ಜಗದೀಶ್ ಮನೆ ಮೇಲೆ ಎಸಿಬಿ ದಾಳಿ
ತುಮಕೂರು,ಡಿ.13:ಅಕ್ರಮ ಆಸ್ತಿ ಹೊಂದಿರುವ ದೂರಿಗೆ ಸಂಬಂಧಿಸಿದಂತೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಪಿಡಬ್ಲ್ಯುಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ನಿವಾಸದ ಮೇಲೆ ಬುಧವಾರ ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಎಸಿಬಿ ಡಿವೈಎಸ್ಪಿ ಜಿ.ಎನ್. ಮೋಹನ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಜಗದೀಶ್ ಅವರ ತುಮಕೂರಿನ ಸರಸ್ವತಿ ಪ್ಮರಂನಲ್ಲಿರುವ ಮನೆ, ಕಚೇರಿ, ಸರಕಾರಿ ಕ್ವಾರ್ಟಸ್ ಮೇಲೆ ದಾಳಿ ನಡೆಸಿ ಕಾಗದ ಪತ್ರ ಪರಿಶೀಲನೆ ನಡೆಸಿದ್ದಾರೆ.ಜಗದೀಶ್ ಅವರು ಕೊರಟಗೆರೆಯಲ್ಲಿ ಸತತ ನಾಲ್ಕೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು.ಅಪಾರ ಪ್ರಮಾಣದ ಸ್ಥಿರಾ ಹಾಗೂ ಚರಾಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಎರಡು ವರ್ಷಗಳ ಹಿಂದೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿಗೆ ಮಾಹಿತಿ ಕಲೆ ಹಾಕಿದ್ದರಾದರೂ, ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕಿರಲಿಲ್ಲ ಎನ್ನಲಾಗಿದೆ.ಎಸಿಬಿ ದಾಳಿಗೆ ಒಳಗಾಗಿರುವ ಜಗದೀಶ್ ಅವರಿಗೆ ಕೆಲ ಪ್ರಭಾವಿ ವ್ಯಕ್ತಿಗಳ ಕೃಪಾರ್ಶೀವಾದ ಇರುವುದೇ ದಾಳಿಗೆ ಅನುಮತಿ ವಿಳಂಬವಾಗಲು ಕಾರಣ ಎನ್ನಲಾಗಿದೆ.