ಗಲಭೆಯ ಹೊಣೆಯನ್ನು ಅಮಿತ್ ಶಾ ಹೊರಬೇಕು: ಯು.ಟಿ.ಖಾದರ್
ಬೆಂಗಳೂರು, ಡಿ.13: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ ಹಾಗೂ ಶಿರಸಿಯಲ್ಲಿ ನಡೆದಂತಹ ಗಲಭೆಗಳ ನೇರ ಹೊಣೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೊರಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಆಗ್ರಹಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊನ್ನಾವರದಲ್ಲಿ ನಡೆದಂತಹ ಒಂದು ಸಣ್ಣ ವಿಚಾರವನ್ನು ಮುಂದಿಟ್ಟುಕೊಂಡು ಅದನ್ನು ರಾಜ್ಯಾದ್ಯಂತ ದೊಡ್ಡದಾಗಿ ಬಿಂಬಿಸಲು ಬಿಜೆಪಿ ಮುಖಂಡರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪರೇಶ್ ಸಾವು ಯಾವ ರೀತಿಯಲ್ಲಿ ಸಂಭವಿಸಿದೆ ಎಂಬುದನ್ನು ತಿಳಿದುಕೊಳ್ಳಲು ಪೊಲೀಸರಿಗೆ ಅವಕಾಶವನ್ನು ನೀಡದೆ, ಹೊನ್ನಾವರದಲ್ಲಿ ಬಿಜೆಪಿಯವರು ಪ್ರತಿಭಟನೆ ನಡೆಸಿದರು. ಆನಂತರ ಕುಮಟಾ ಹಾಗೂ ಶಿರಸಿಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದೆ ಎಂದು ಖಾದರ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರೊಬ್ಬರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಲ್ಲಿ ಪ್ರಚೋದನಾತ್ಮಕ ಭಾಷಣಗಳು ಆಗಿವೆ. ಪೊಲೀಸರ ಜೀಪಿಗೆ ಬೆಂಕಿ ಹಾಕಿ, ಕಲ್ಲು ತೂರಾಟ ನಡೆಸಿ, ಅಶಾಂತಿಯ ವಾತಾವರಣ ಸೃಷ್ಟಿಸಿದ್ದಾರೆ ಎಂದು ಅವರು ಆರೋಪಿಸಿದರು.
ಪರೇಶ್ ನಿಗೂಢ ಸಾವು ಯಾವ ರೀತಿಯಲ್ಲಿ ಸಂಭವಿಸಿದೆ ಎಂಬುದು ಇನ್ನು ಗೊತ್ತಾಗಿಲ್ಲ, ಮರಣೋತ್ತರ ಪರೀಕ್ಷೆ ವರದಿ ಬರುವ ಮುನ್ನ ಹೊನ್ನಾವರದಲ್ಲಿ ಆರಂಭವಾದ ಪ್ರತಿಭಟನೆ, ನಂತರ ಕುಮಟಾ ಹಾಗೂ ಶಿರಸಿಗೂ ಹಬ್ಬಿದೆ. ಸತ್ಯಾಂಶ ಪತ್ತೆ ಹಚ್ಚಲು ಪೊಲೀಸರಿಗೆ ಕಾಲಾವಕಾಶ ನೀಡದೆ, ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು.
ಗಲಭೆ ಮಾಡಿ ಅಶಾಂತಿಯ ವಾತಾವರಣ ಸೃಷ್ಟಿಸುವುದು, ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ರಾಜ್ಯಪಾಲರಿಗೆ ದೂರು ನೀಡುವುದು, ಆನಂತರ ಸಂಸತ್ತಿನಲ್ಲಿ ಈ ವಿಚಾರ ಚರ್ಚಿಸಿ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಯ ಹೆಸರಿಗೆ ಕಳಂಕ ತರಲು ಬಿಜೆಪಿಯವರು ಪೂರ್ವ ನಿಯೋಜಿತವಾಗಿ ನಡೆಸಿದ ಕೃತ್ಯ ಇದು ಎಂದು ಖಾದರ್ ದೂರಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ. ಎಲ್ಲ ವರ್ಗದವರೂ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ. ಇದನ್ನು ಸಹಿಸಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನ ಪಡೆಯಲು ಹಲವಾರು ರೀತಿಯಲ್ಲಿ ಶ್ರಮಪಡಬೇಕು. ಆದರೆ, ಬಿಜೆಪಿಯಲ್ಲಿ ಗುರುತಿಸಿಕೊಳ್ಳಲು, ಸ್ಥಾನಮಾನ ಪಡೆಯಲು ಗಲಭೆಗಳನ್ನು ಮಾಡಿಸಿರುವ ಪ್ರಮಾಣಪತ್ರವಿದ್ದರೆ ಸಾಕು ಎಂದು ಅವರು ಟೀಕಿಸಿದರು.
ಮಂಗಳೂರು ಸಂಸದ ದಕ್ಷಿಣ ಕನ್ನಡ ಜಿಲ್ಲೆಗೆ, ಕಾರವಾರದ ಸಂಸದ ಉತ್ತರ ಕನ್ನಡ ಜಿಲ್ಲೆಗೆ, ಮೈಸೂರಿನ ಸಂಸದ ಮೈಸೂರು ಜಿಲ್ಲೆಗೆ, ಬಿಜೆಪಿ ರಾಜ್ಯಾಧ್ಯಕ್ಷ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವುದಾಗಿ ಹೇಳುತ್ತಾರೆ. ಶೋಭಾ ಕರಂದ್ಲಾಜೆಯವರು ಕರಾವಳಿ ಹೊತ್ತಿ ಉರಿಯಲಿದೆ ಎನ್ನುತ್ತಾರೆ. ಬಿಜೆಪಿಯಲ್ಲಿ ಇರುವವರೆಲ್ಲ ಬೆಂಕಿ ಹಚ್ಚುವವರೆ ಎಂದು ಖಾದರ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ನಾವು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಪರಿಸ್ಥಿತಿಯನ್ನು ತಿಳಿಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಆನಂತರ, ಗಲಭೆಗೆ ಕಾರಣಕರ್ತರಾದವರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪರೇಶ್ ಮರಣೋತ್ತರ ಪರೀಕ್ಷೆ ವರದಿ ಬರುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಸೈಬರ್ಕ್ರೈಂ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಖಾದರ್ ತಿಳಿಸಿದರು.