ರಾಜಸ್ಥಾನ ಸಜೀವದಹನ ಪ್ರಕರಣ: ಆರೋಪಿಯ ಪತ್ನಿಯ ಖಾತೆಗೆ 3 ಲಕ್ಷ ರೂ. ಜಮೆ ಮಾಡಿದ 'ಸಹೃದಯರು'!
ಜೈಪುರ್,ಡಿ.13 : ಪಶ್ಚಿಮ ಬಂಗಾಳದ ಮುಸ್ಲಿಂ ಕಾರ್ಮಿಕನೊಬ್ಬನನ್ನು ಬೆಂಕಿ ಹಚ್ಚಿ ಸಾಯಿಸಿ ನಂತರ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಈಗ ಜೈಲುಕಂಬಿ ಎಣಿಸುತ್ತಿರುವ ಶಂಭುಲಾಲ್ ರೇಗರ್ ಹೆಸರಿನಲ್ಲಿ ಸುಮಾರು 3 ಲಕ್ಷ ರೂಪಾಯಿ ಸಂಗ್ರಹವಾಗಿರುವ ಬ್ಯಾಂಕ್ ಖಾತೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ದೇಶದಾದ್ಯಂತ ಸುಮಾರು 516 ಜನರು ರೇಗರ್ ಪತ್ನಿಯ ಹೆಸರಿಗೆ ಈ ಹಣ ಸಂದಾಯ ಮಾಡಿದ್ದರು. ಈ ಖಾತೆಗೆ ಹಣ ಸಂದಾಯ ಮಾಡಿದವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡ ಇಬ್ಬರು ವರ್ತಕರನ್ನು ಪೊಲೀಸರು ಬಂಧಿಸಿದ್ದಾರೆ. ರೇಗರ್ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಡಲಾಗುತ್ತಿದೆ ಎಂದು ತಿಳಿದ ಪೊಲೀಸರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಈ ಖಾತೆಗೆ ಯಾರ್ಯಾರೆಲ್ಲಾ ಹಣ ಸಂದಾಯ ಮಾಡಿದ್ದಾರೆಂದು ತನಿಖೆ ನಡೆಸಿ ಅವರಿಗೂ ಆರೋಪಿಗೂ ಏನು ಸಂಬಂಧ ಎಂದು ತಿಳಿಯಲು ಪ್ರಯತ್ನಿಸಲಾಗುವುದು ಎಂದು ಉದಯಪುರ್ ಐಜಿ ಆನಂದ್ ಶ್ರೀವಾಸ್ತವ ಹೇಳಿದ್ದಾರೆ.
ರೇಗರ್ ಬೆಂಬಲಾರ್ಥವಾಗಿ ಸಂಘಪರಿವಾರ ಇಂದು ಉದಯಪುರದಲ್ಲಿ ರ್ಯಾಲಿಯೊಂದನ್ನು ನಡೆಸಲು ಉದ್ದೇಶಿಸಿವೆ ಎಂದು ಮಾಹಿತಿ ಪಡೆದಿರುವ ಪೊಲೀಸರು ಅಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರಲ್ಲದೆ ಅಂರ್ತಜಾಲ ಸೇವೆಯನ್ನೂ ಸ್ಥಗಿತಗೊಳಿಸಿದ್ದಾರೆ.