ಕೇಂದ್ರದಿಂದ ಮೇಲ್ವರ್ಗಕ್ಕೆ ಅನುಕೂಲಕರ ಕಾನೂನುಗಳ ಜಾರಿ: ವರಲಕ್ಷ್ಮೀ
ಸಿಪಿಎಂ ಜಿಲ್ಲಾ ಸಮ್ಮೇಳನ
ಸಕಲೇಶಪುರ, ಡಿ.18: ಕೇಂದ್ರ ಸರಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳು ಬಡವರ ಹಾಗೂ ಕೂಲಿ ಕಾರ್ಮಿಕರ ಪರ ಇಲ್ಲ. ಕೇಂದ್ರ ಸರಕಾರದಿಂದ ಮೇಲ್ವರ್ಗದವರ ಅನುಕೂಲಕ್ಕೆ ತಕ್ಕ ಕಾನೂನುಗಳು ಜಾರಿಯಾಗುತ್ತಿವೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹೇಳಿದ್ದಾರೆ.
ಪಟ್ಟಣದಲ್ಲಿ ಶನಿವಾರ ನಡೆದ ಸಿಪಿಎಂ 10ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಈಗಿನ ಸರಕಾರ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿದೆ. ಮೇಲ್ವರ್ಗ ದವರ ಅನುಕೂಲಕ್ಕೆ ತಕ್ಕಂತಹ ಕಾನೂನುಗಳು ಜಾರಿಯಾಗುತ್ತಿವೆ ಎಂದರು.
ದೇಶದ ರಕ್ಷಣೆಗೆ ಇರುವಂತಹ ಉಪಕರಣಗಳ ತಯಾರಿಕಾ ಘಟಕಗಳಲ್ಲಿ 176 ಕಂಪೆನಿಗಳನ್ನು ವಿದೇಶಿ ಕಂಪೆನಿಗಳಿಗೆ ನೀಡಲಾಗಿದೆ. ಇದು ಮೇಕ್ ಇನ್ ಇಂಡಿಯಾ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಾಳ್ಳ ಮಾತನಾಡಿ, ದೇಶ ಪ್ರೇಮವನ್ನು ಜನರ ಬದುಕಿನ ಅಭಿವೃದ್ಧಿಗೆ ನಾವು ನೀಡುವ ಸಹಕಾರದಲ್ಲಿ ಕಾಣಬೇಕಲ್ಲದೆ, ಜನರ ಹಿಂಸೆಯ ಸಾವಿನಲ್ಲಿ ಶೋಧಿಸಬಾರದು ಎಂದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್ ಮಾತನಾಡಿದರು. ಮಾಜಿ ಶಾಸಕ ಹಾಗೂ ರಾಜ್ಯ ಸಿಐಟಿಯು ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ, ತಾಲೂಕು ಮುಖಂಡ ಹರೀಶ್, ಸುಕುಮಾರ್, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.