ರಾಜ್ಯ ಸರಕಾರದಿಂದ ಹೊಗೆ ಮುಕ್ತ ಕರ್ನಾಟಕ ನಿರ್ಮಾಣ: ಸಚಿವ ಎ.ಮಂಜು
ಹಾಸನ, ಡಿ.23: ರಾಜ್ಯ ಸರಕಾರ ಹೊಗೆ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಮುಂದಾಗಿದ್ದು, ಜಿಲ್ಲೆಯಲ್ಲಿ 38 ಸಾವಿರ ಕುಟುಂಬಗಳಿಗೆ ಅನಿಲಭಾಗ್ಯ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹೊಗೆ ರಹಿತ ಆಗಬೇಕೆಂಬ ಉದ್ದೇಶದಿಂದ ಎಲ್ಲರಿಗೂ ಅನಿಲ ಭಾಗ್ಯ ಕೊಡಲು ಕಾಂಗ್ರೆಸ್ ಸರಕಾರ ಮುಂದಾಗಿದೆ. ಅನಿಲ ಭಾಗ್ಯ ಯೋಜನೆಯಿಂದ ರಾಜ್ಯದ 10 ಲಕ್ಷ ಕುಟುಂಬಗಳಿಗೆ ಮೊದಲ ಹಂತದಲ್ಲಿ ಉಚಿತ ಸಿಲಿಂಡರ್, ಗ್ಯಾಸ್ಸ್ಟವ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1,19,453 ಜನರು ಸೀಮೆ ಎಣ್ಣೆ ಪಡೆಯುತ್ತಿದ್ದು, ಮೊದಲ ಹಂತದಲ್ಲಿ 38 ಸಾವಿರ ಕುಟುಂಬಗಳಿಗೆ ಅನಿಲ ಭಾಗ್ಯ ಯೋಜನೆಯಡಿ ಸಿಲಿಂಡರ್, ಸ್ಟವ್ ವಿತರಿಸಲಾಗುವುದು ಇದರಲ್ಲಿ ಶೇ.25 ರಷ್ಟು ಪರಿಶಿಷ್ಟ ಜಾತಿ ಮತ್ತು ಕುಟುಂಬಗಳು ಸೇರಿದೆ ಎಂದರು. ಒಂದು ಕುಟುಂಬಕ್ಕೆ 4,040 ರೂ.ಗಳಂತೆ 38 ಸಾವಿರ ಕುಟುಂಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಏಜೆನ್ಸಿಗಳಿಗೆ ಸರಕಾರದ ಹಣ ಪಾವತಿಯಾಗುತ್ತದೆ ಎಂದ ಅವರು, ಇದೀಗ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ನ್ಯಾಯಬೆಲೆ ಅಂಗಡಿವಾರು ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.
ಜಿಲ್ಲೆಯ ಅರಸೀಕೆರೆಗೆ 6,215, ಬೇಲೂರು 7,214, ಹಾಸನ 1,419, ಸಕಲೇಶಪುರ 4,527, ಅರಕಲಗೂಡು 7,389, ಚನ್ನರಾಯಪಟ್ಟಣ 5,361, ಹೊಳೆನರಸೀಪುರ 5,974ರಂತೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಪಶು ಆಹಾರದ ದರ ಕಡಿಮೆ ಮಾಡಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳುತ್ತಿದ್ದಾರೆ. ಕೆಎಂಎಫ್ನ ನಿರ್ದೇಶಕರಾಗಿರುವ ಅವರು ಸಭೆಯಲ್ಲಿ ಧ್ವನಿ ಎತ್ತಿ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದರು.
ರಾಜ್ಯ ಸರಕಾರದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಗೂ, ಕೇಂದ್ರ ಸರಕಾರ ಜಾರಿಗೆ ತಂದಿರುವ ಉಜ್ವಲ ಯೋಜನೆಗೂ ಯಾವುದೇ ಸಂಬಂಧವಿಲ್ಲ.
ಸಚಿವ ಎ.ಮಂಜು