ಬಿಜೆಪಿಯವರು ಸಂಸ್ಕಾರ ಹೀನರು: ಸಚಿವ ಆಂಜನೇಯ
ಚಿತ್ರದುರ್ಗ, ಡಿ.27: ಬ್ರಾಹ್ಮಣ ಸಮುದಾಯದವರು ಸುಸಂಸ್ಕೃತರಾಗಿ ಇರುತ್ತಾರೆ. ಮಾಜಿ ಸಿಎಂ ಆರ್.ಗುಂಡೂರಾವ್ ಎಲ್ಲ ಜಾತಿ ಜನಾಂಗದವರಿಗೂ ಗೌರವ ನೀಡುತ್ತಿದ್ದರು. ಆದರೆ, ಅದೇ ಸಮುದಾಯದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಸಣ್ಣತನದಿಂದ ಮಾತನಾಡುತ್ತಿದ್ದಾರೆಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಗುಡುಗಿದ್ದಾರೆ.
ಬುಧವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಏರ್ಪಡಿಸಿದ್ದ ಸಾಧನ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಗಡೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಯಾವುದೇ ಗೌರವ ಇಲ್ಲ. ಇಂತಹ ಹೇಳಿಕೆಗಳಿಂದ ಮತ ಗಳಿಸುತ್ತೇವೆಂದು ಅವರು ಭಾವಿಸಿದ್ದರೆ ಅದು ಮೂರ್ಖತನ ಎಂದು ಲೇವಡಿಯಾಡಿದರು.
ಬಿಜೆಪಿಯವರಿಗೆ ಸಂಸ್ಕೃತಿ-ಸಂಸ್ಕಾರವೇ ಇಲ್ಲ. ಹೀಗಾಗಿ ರಾಜ್ಯದ ಆರೂವರೆ ಕೋಟಿ ಜನರ ಪ್ರತಿನಿಧಿಯಾದ ಸಿಎಂ ವಿರುದ್ಧ ಮನಸೋಇಚ್ಛೆ ಮಾತನಾಡುತ್ತಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವುದು ನಿಶ್ಚಿತ. ಹೀಗಾಗಿ ಬಿಜೆಪಿ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.