ನಾಗಮಂಗಲ: ಹಾಸ್ಟೆಲ್ನಿಂದ ವಿದ್ಯಾರ್ಥಿ ನಾಪತ್ತೆ ;ವಾರ್ಡನ್ ವಿರುದ್ಧ ಪೋಷಕರ ಆಕ್ರೋಶ
ನಾಗಮಂಗಲ, ಡಿ.29: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ನ ವಾರ್ಡನ್ ರಾಮೇಗೌಡರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದು, ತಿಂಗಳ ಬಳಿಕ ವಿಷಯ ತಿಳಿದು ಕಂಗಾಲಾದ ಪೋಷಕರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಟ್ಟಣದ ಟಿ.ಬಿ.ಬಡಾವಣೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಎಚ್.ಎಂ.ದುರ್ಗೇಶ(14) ಕಾಣೆಯಾಗಿದ್ದಾನೆ. ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಮಂಜುನಾಥ ಎಂಬುವರ ಮಗನಾದ ದುರ್ಗೇಶ ನಾಗಮಂಗಲ ಪಟ್ಟಣದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ 9ನೆ ತರಗತಿಯಲ್ಲಿ ವ್ಯಾಸಾಂಗ ಮಾಡಿಕೊಂಡು ಹಾಸ್ಟೆಲ್ನಲ್ಲಿ ನೆಲೆಸಿದ್ದನು.
ಒಂದು ತಿಂಗಳಿಂದ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೋಷಕರು ಡಿ.27 ರಂದು ಪಟ್ಟಣಕ್ಕೆ ಆಗಮಿಸಿ ಶಾಲೆಯಲ್ಲಿ ವಿಚಾರಿಸಿದಾಗ ವಿದ್ಯಾರ್ಥಿ ತಿಂಗಳಿಂದಲೂ ಶಾಲೆಗೆ ಬರುತ್ತಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ಕಂಗಾಲಾದ ಪೋಷಕರು ನೇರವಾಗಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತೆರಳಿ ವಾರ್ಡನ್ ರಾಮೇಗೌಡರನ್ನು ವಿಚಾರಿಸಿದಾಗ ಅವರು ಎರಡು ತಿಂಗಳಿಂದಲೂ ನಿಮ್ಮ ಮಗ ಹಾಸ್ಟೆಲ್ನಲ್ಲಿ ಇಲ್ಲ. ಎಲ್ಲಿ ಹೋಗಿದ್ದಾನೋ ಗೊತ್ತಿಲ್ಲ ಎಂದು ತೀರಾ ಉದಾಸೀನವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಮತ್ತಷ್ಟು ಕಂಗಾಲಾದ ವಿದ್ಯಾರ್ಥಿ ತಂದೆ ಮಂಜುನಾಥ್ ವಾರ್ಡನ್ ಅವರನ್ನು ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಡಿ.28 ರಂದು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿ ಕಾಣೆಯಾದ ತಕ್ಷಣವೇ ವಾರ್ಡನ್ ರಾಮೇಗೌಡ ಪೋಷಕರು ಮತ್ತು ಮೇಲಾಧಿಕಾರಿಗಳೀಗೆ ವಿಷಯ ತಿಳಿಸಿ ಠಾಣೆಯಲ್ಲಿ ದೂರು ದಾಖಲಿಸದೆ ನಿರ್ಲಕ್ಷ್ಯವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಷಯ ತಿಳಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಯಪ್ರಕಾಶ್ ಹಾಸ್ಟೆಲ್ ಮತ್ತು ಶಾಲೆಗೆ ಭೇಟಿ ನೀಡಿದ್ದಾರೆ. ಕಾಣೆಯಾಗಿರುವ ಬಾಲಕನ ಬಲತೋಳಿನ ಮೇಲೆ ಎಂ.ಜೆ. ಮತ್ತು ಎ ಎಂದು ಅಚ್ಚೆ ಹಾಕಿಸಿಕೊಂಡಿದ್ದು, ಸುಳಿವು ಸಿಕ್ಕವರಗೆಉ ಹತ್ತಿರದ ಠಾಣೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.