ಶಿವಮೊಗ್ಗ: ಕ್ಯಾಂಟರ್ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು
ಶಿವಮೊಗ್ಗ, ಜ.4: ನಿಲ್ಲಿಸಿದ್ದ ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಕಾರಿಪುರ ಪಟ್ಟಣದ ಮಹಾದೇವ ರೈಸ್ಮಿಲ್ ಸಮೀಪದ ಶಿವಮೊಗ್ಗ ರಸ್ತೆಯಲ್ಲಿ ವರದಿಯಾಗಿದೆ.
ಹರೀಶ್ ಮೃತಪಟ್ಟ ಬೈಕ್ ಚಾಲಕ ಎಂದು ಗುರುತಿಸಲಾಗಿದೆ. ಕ್ಯಾಂಟರ್ ಲಾರಿ ಚಾಲಕನು ವೇಗವಾಗಿ ವಾಹನವೊಂದನ್ನು ಓವರ್ ಟೇಕ್ ಮಾಡಿಕೊಂಡು ಹೋಗಿದ್ದು, ಈ ವೇಳೆ ಏಕಾಏಕಿ ವಾಹನ ನಿಲ್ಲಿಸಿದ್ದಾನೆ. ಇದರಿಂದ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರ ಹರೀಶ್, ಚಾಲನೆಯ ನಿಯಂತ್ರಣ ಕಳೆದುಕೊಂಡು ಕ್ಯಾಂಟರ್ ಹಿಂದಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ರನ್ನು ಸಾರ್ವಜನಿಕರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಈ ಸಂಬಂಧ ಕ್ಯಾಂಟರ್ ಚಾಲಕನ ವಿರುದ್ದ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story