ಮಡಿಕೇರಿ: ಜ.9 ರಂದು ಮುಖ್ಯಮಂತ್ರಿ ಆಗಮನ; ನಗರ ಕಾಂಗ್ರೆಸ್ನಿಂದ ಪಾದಯಾತ್ರೆ
ಮಡಿಕೇರಿ ಜ.6 :ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.9 ರಂದು ನಗರಕ್ಕೆ ಆಗಮಿಸುತ್ತಿದ್ದು, ಪೂರ್ವಭಾವಿಯಾಗಿ ನಗರ ಕಾಂಗ್ರೆಸ್ ಸಮಿತಿ ನಗರದಲ್ಲಿ ಪಾದಯಾತ್ರೆ ನಡೆಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರನ್ನು ಆಹ್ವಾನಿಸಿತು.
ಕಾಂಗ್ರೆಸ್ ನಗರಾಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾಕ್ ಅವರ ನೇತೃತ್ವದಲ್ಲಿ ನಗರದ ಮುಖ್ಯ ಬೀದಿಗಳು ಮತ್ತು ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಕಾರ್ಯಕರ್ತರು ಸಾಧನಾ ಸಮಾವೇಶಕ್ಕೆ ಸಾರ್ವಜನಿಕರನ್ನು ಆಹ್ವಾನ ಮಾಡಿದರು.
ಈ ಸಂದರ್ಭ ಮಾತನಾಡಿದ ಕೆ.ಯು.ಅಬ್ದುಲ್ ರಜಾಕ್ 2013ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ನುಡಿದಂತೆ ನಡೆದ ಸರಕಾರವಾಗಿದೆ ಎಂದರು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158ಕ್ಕೂ ಹೆಚ್ಚು ಭರವಸೆ ಈಡೇರಿಸಿದ ಸರಕಾರ ಜನರ ನಿರೀಕ್ಷೆಯಂತೆ ಸ್ವಚ್ಚ, ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ ಎಂದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಮೈತ್ರಿ, ವಿದ್ಯಾಸಿರಿ, ಬಿದಾಯಿ, ಸಾಲಮನ್ನಾ, ಪಶುಭಾಗ್ಯ, ಕ್ಷೀರಧಾರೆ ಹೀಗೆ ಹಲವಾರು ಜನಪರ ಯೋಜನೆಗಳನ್ನು ಕಾರ್ಯಗತಕ್ಕೆ ತಂದ ಹೆಮ್ಮೆಯ ಸರಕಾರ ಇದಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯರು, ವಿಕಲಚೇತನರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹೀಗೆ ಎಲ್ಲಾ ವರ್ಗದ ಜನರಿಗೆ ಆಶಾಕಿರಣವಾದ ಸರಕಾರ ಇದಾಗಿದ್ದು, ಜನಾಭಿಪ್ರಾಯಕ್ಕೆ ಮುಕ್ತವಾಗಿರುವ ಹಾಗೂ ಜನಪರ ನಿಲುವುಗಳಿಗೆ ಹೆಚ್ಚಿನ ಮನ್ನಣೆ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.9 ರಂದು ಭೇಟಿ ನೀಡುವ ಸಂದರ್ಭ ಎಲ್ಲರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷರಾದ ಚುಮ್ಮಿದೇವಯ್ಯ, ಮಾಜಿ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್, ನಗರಸಭಾ ಸದಸ್ಯರುಗಳಾದ ತಜಸುಂ, ಜುಲೇಕಾಬಿ, ಯತೀಶ್, ಎಂ.ಎ.ಉಸ್ಮಾನ್, ಮಾಜಿ ಸದಸ್ಯರಾದ ಸುನಿಲ್ ನಂಜಪ್ಪ, ರಮಾಮಣಿ, ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಜಫ್ರುಲ್ಲಾ, ಚಂದ್ರಶೇಖರ್, ಟಿ.ಜಿ.ನಾಣಯ್ಯ, ಕಾರ್ಯದರ್ಶಿ ಮುನೀರ್ ಮಾಚರ್, ಜಗದೀಶ್, ಯೂಸುಫ್ ಮೊಹಮ್ಮದ್, ಇಬ್ರಾಹಿಂ, ಇಸ್ಮಾಯಿಲ್, ಹಫೀಜ್, ಇಮ್ರಾನ್, ಕೌಸರ್, ಪಿಲೋಮಿನಾ ರಮಾಮಣಿರಮಾಶಶಿ, ರಾಧ, ಅಶ್ರಫ್, ಕುಸುಮ, ಮಿಥುನ್, ರಾಜೇಂದ್ರ, ಹನೀಫ್, ರಹಮ್ಮತ್ಉಲ್ಲಾ ಮತ್ತಿತರ ಪ್ರಮುಖರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.