ಸುತ್ತೂರಿನಲ್ಲಿ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ 145 ಜೋಡಿಗಳು
ಮೈಸೂರು,ಜ.14: ಭಾರತದಲ್ಲಿ ಅದ್ದೂರಿ , ಅಡಂಬರದ ಮದುವೆಗಳನ್ನು ಮಾಡಿ ಜೀವನ ಪರ್ಯಂತ ಎಣಗಾಡುವುದನ್ನು ಕೇಳಿದ್ದೇವೆ. ಆದರೆ ಯಾವುದೇ ಖರ್ಚಿಲ್ಲದೇ 145 ಜೋಡಿಗಳಿಗೆ ದಾಂಪತ್ಯದ ಹಾದಿ ತೋರುತ್ತಿರುವ ಸುತ್ತೂರು ಮಠದ ಕಾರ್ಯ ಶ್ಲಾಘನೀಯವಾದದ್ದು ಎಂದು ಮಾರಿಷಸ್ ಗಣರಾಜ್ಯದ ಉಪರಾಷ್ಟ್ರಪತಿ ಪರಮಶಿವಂ ಪಿಳ್ಳೈ ವ್ಯಾಪೂರಿ ತಿಳಿಸಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ರವಿವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹದ ಮುಖಾಂತರ ಸಾಮಾಜಿಕ ಪ್ರಜ್ಞೆಯನ್ನು ಕೊಡುತ್ತಿರುವುದು ಮಠದ ಕೊಡುಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಜೋಡಿಗಳು ಸುಖ-ದುಃಖವನ್ನು ಸಮನಾಗಿ ಹಂಚಿಕೊಂಡು ಯಶಸ್ವಿ ಜೀವನ ನಡೆಸಬೇಕು. ದುಶ್ಚಟಗಳಿಗೆ ಬಲಿಯಾಗದೇ, ಕೌಟುಂಬಿಕ ಕಲಹವಿಲ್ಲದೇ ಶಾಂತಿಯುತ ಜೀವನ ನಡೆಸುತ್ತ ಸಂತೋಷದಿಂದ ಬದುಕುವಂತೆ ಶುಭ ಹಾರೈಸಿದರು.
ಸುತ್ತೂರು ಮಠದ ಶೈಕ್ಷಣಿಕ ಚಟುವಟಿಕೆಗಳಿಂದ ತುಂಬ ಪ್ರಭಾವಿತನಾಗಿದ್ದೇನೆ. ಶೈಕ್ಷಣಿಕ ಮಾತ್ರವಲ್ಲದೇ, ಆರ್ಥಿಕ ಸ್ವಾವಲಂಬನೆಯಂತಹ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರನ್ನು ಮಠ ತಲುಪುತ್ತಿದ್ದು, ಇದಕ್ಕೆ ಕಾರಣರಾದ ಮಠದ ಎಲ್ಲ ಶ್ರೀಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆಂದು ನುಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಜಾತ್ರಾ ಮಹೋತ್ಸವಗಳಿಂದ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿ ಉಳಿದಿದೆ. ಸುತ್ತೂರು ಜಾತ್ರೆ ವೈಶಿಷ್ಟಪೂರ್ಣ ಜಾತ್ರಾ ಮಹೋತ್ಸವವಾಗಿ ಜರುಗುತ್ತಿದೆ ಎಂದರು.
ಸುತ್ತೂರು ಜಾತ್ರೆಯಲ್ಲಿ ಕೃಷಿಗೆ ಒತ್ತು ನೀಡಲಾಗಿದೆ. ದನದ ಜಾತ್ರೆ, ಮಹಿಳೆಯರು, ಯುವಕರಿಗೂ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಲಕ್ಷಾಂತರ ಜನರು ಸೇರಿ ತೇರು ಎಳೆಯಲಿದ್ದಾರೆ. ಎಲ್ಲ ವರ್ಗಗಳ ಜನರು ಒಂದು ಕಡೆ ಸೇರಿ ಸಂಭ್ರಮಿಸುವ ಜಾತ್ರೆಗಳು ಸಮಾಜಕ್ಕೆ ದಿಕ್ಸೂಚಿಯಾದ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.
ಮಧ್ಯಮ ವರ್ಗ ಮತ್ತು ಬಡವರಿಗೆ ಮದುವೆ ಮಾಡುವುದು ಆರ್ಥಿಕ ಹೊರೆ. ಈ ಆರ್ಥಿಕ ಹೊರೆಯನ್ನು ತಪ್ಪಿಸಲೆಂದು ಸುತ್ತೂರು ಮಠವು ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿದೆ. 145 ಜೋಡಿಗಳು ವಿವಾಹ ಬಂಧನಕ್ಕೆ ಒಳಗಾಗುವಂತೆ ಮಾಡಿರುವುದು ದೊಡ್ಡದಾದ ಸಮಾಜ ಸೇವೆ ಎಂದ ಅವರು, ದಾಂಪತ್ಯ ಜೀವನ ಸುಖಮಯವಾಗಿರಲೆಂದು ಶುಭ ಹಾರೈಸಿದರು.