ಆದಿವಾಸಿ ಕಲೆಗಳನ್ನು ನಶಿಸಲು ಬಿಡಬೇಡಿ: ಎಸ್ಪಿ ರಾಜೇಂದ್ರ ಪ್ರಸಾದ್ ಕರೆ
ರಾಷ್ಟ್ರೀಯ ಕಾಡಿನ ಮಕ್ಕಳ ಹಬ್ಬಕ್ಕೆ ಸಂಭ್ರಮದ ತೆರೆ
ಮಡಿಕೇರಿ, ಜ.15 : ಪ್ರಕೃತಿ ಸೌಂದರ್ಯದೊಂದಿಗೆ ಅರಣ್ಯವಾಸಿಗಳ ಕಲಾಪ್ರಕಾರಗಳನ್ನು ಉಳಿಸುವ ಮತ್ತು ಅವುಗಳಿಗೆ ಪ್ರೋತ್ಸಾಹ ನೀಡುವ ಕಾಳಜಿಯನ್ನು ಪ್ರತಿಯೊಬ್ಬರು ತೋರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ಕರೆ ನೀಡಿದ್ದಾರೆ.
ಮಡಿಕೇರಿ ಆಕಾಶವಾಣಿ ಕೇಂದ್ರ ಹಾಗೂ ತಂಜಾಪೂರಿನ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ 6ನೇ ವರ್ಷದ ಕಾಡಿನ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅರಣ್ಯ ಪ್ರದೇಶವನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಕಾಡಿನ ಮಕ್ಕಳು ತಮ್ಮ ವಿಶಿಷ್ಟ ಕಲೆಯನ್ನು ಕೂಡ ಜೀವನದ ಒಂದು ಭಾಗವಾಗಿ ಗೌರವಿಸುತ್ತಾರೆ. ಈ ಕಲೆಯನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕೆಂದರು. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳ ನೆಲೆ ಮತ್ತು ಕಲೆಯನ್ನು ನಶಿಸಲು ಬಿಡಬಾರದೆಂದು ಎಸ್ಪಿ ರಾಜೇಂದ್ರಪ್ರಸಾದ್ ತಿಳಿಸಿದರು.
ಆಕಾಶವಾಣಿ ನಿಲಯ ನಿರ್ದೇಶಕರಾದ ಬಿ.ಎಂ.ರಾಘವೇಂದ್ರ, ನಬಾರ್ಡ್ ವ್ಯವಸ್ಥಾಪಕರಾದ ಎಂ.ಸಿ.ನಾಣಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಹಕ್ಕಿ ಪಿಕ್ಕಿ ಸಮೂಹದ ಪರ್ಡಿ, ಸಿದ್ದಿ ನೃತ್ಯ, ತಂಬೂರಿ ಪದ, ಬುಡಕಟ್ಟು ಹಾಡು, ಮುಳ್ಳು ಕುಣಿತ, ಕೋರಲ್ ನೃತ್ಯ ಮತ್ತು ಗೂರ್ಕನ ನೃತ್ಯ ಸೇರಿದಂತೆ ಆರು ತಂಡಗಳು ಹಾಗೂ ಕೊಡಗಿನ ಬುಡಕಟ್ಟು ಸಮುದಾಯಗಳಾದ ಬೆಟ್ಟ ಕುರುಬ, ಜೇನು ಕುರುಬ, ಮಲೆ ಕುಡಿಯ, ಸೋಲಿಗ, ಯರವ ಸಮುದಾಯದ ಕಲಾಪ್ರಕಾರ, ಡೊಳ್ಳು ಕುಣಿತ, ಪರೆಕೊಟ್ಟ್, ಕೊಡಗಿನ ಸಾಂಪ್ರದಾಯಿಕ ಬಾಳೋಪಾಟ್, ಉಮ್ಮತ್ತಾಟ್, ಕೊಡವ ವಾಲಗ ಮೊದಲಾದವುಗಳ ಪ್ರದರ್ಶನ ಕಲಾಭಿಮಾನಿಗಳ ಗಮನ ಸೆಳೆದವು.
ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಛತ್ತೀಸ್ಗಡ್, ಅಸ್ಸಾಂ, ಒಡಿಸ್ಸ, ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶದ ಬುಡಕಟ್ಟು ಸಮುದಾಯಗಳ ಕಲಾವಿದರು ವಿಶಿಷ್ಟ ವಿಭಿನ್ನ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು