ಶಿರಸಿ: ಪ್ರಕಾಶ್ ರೈ ಕುಳಿತಿದ್ದ ವೇದಿಕೆಯನ್ನು ಗೋಮೂತ್ರದಲ್ಲಿ 'ಶುದ್ಧ'ಗೊಳಿಸಿದ ಬಿಜೆಪಿ ಕಾರ್ಯಕರ್ತರು!
ಇದಕ್ಕೆ ಪ್ರಕಾಶ್ ರೈ ಪ್ರತಿಕ್ರಿಯೆ ಏನು ಗೊತ್ತೆ?
ಶಿರಸಿ, ಜ.16: ಖ್ಯಾತ ನಟ ಪ್ರಕಾಶ್ ರೈ ಶನಿವಾರ ಶಿರಸಿಯಲ್ಲಿ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ 'ಶುದ್ಧ'ಗೊಳಿಸಿದ ಘಟನೆ ಸೋಮವಾರ ನಡೆದಿದೆ.
ಶಿರಸಿಯ ರಾಘವೇಂದ್ರ ಮಠದಲ್ಲಿ ಪ್ರೀತಿ ಪದಗಳ ಪಯಣ' ಆಯೋಜನಾ ಸಮಿತಿಯು ಶನಿವಾರ 'ನಮ್ಮ ಸಂವಿಧಾನ ನಮ್ಮ ಹೆಮ್ಮೆ' ಹೆಸರಿನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ಪ್ರಕಾಶ್ ರೈ, ಸಂವಿಧಾನ ಬದಲಾಯಿಸುವ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹರಿಹಾಯ್ದಿದ್ದರು. ಸಂಘ ಪರಿವಾರ ಪ್ರತಿಪಾದಿಸುವ ಹಿಂದುತ್ವವನ್ನು ಟೀಕಿಸಿದ್ದರು. ಇದು ಸಹಜವಾಗಿಯೇ ಸಂಘ ಪರಿವಾರ ಹಾಗೂ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿತ್ತು.
ಇದೀಗ ಪ್ರಕಾಶ್ ರೈ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಶುದ್ಧೀಕರಿಸಿರುವುದಾಗಿ ಹೇಳಿರುವ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಇದಕ್ಕಾಗಿ ವೇದಿಕೆಗೆ ಗೋಮೂತ್ರ ಸಿಂಪಡಿಸಿದ್ದಾರೆ. ಬಳಿಕ ಪೂಜೆ ನಡೆಸಿದರು.
ಈ ಬಗ್ಗೆ ಬಳಿಕ ಪ್ರತಿಕ್ರಿಯಿಸಿರುವ ಬಿಜೆಪಿ ಯುವ ಮೋರ್ಚಾದ ನಗರದ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ, ''ಗೋಮಾಂಸ ಭಕ್ಷಣೆ ಮಾಡುವ ಹಾಗೂ ಹಿಂದೂ ದೇವತೆಗಳನ್ನು ಅಪಮಾನಿಸುವ ವ್ಯಕ್ತಿಗಳ ಭೇಟಿಯಿಂದ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆದ ಧಾರ್ಮಿಕ ಕ್ಷೇತ್ರವನ್ನು ಶುದ್ಧಗೊಳಿಸಲಾಯಿತು' ಎಂದು ಹೇಳಿದ್ದಾರೆ.
ಬಿಜೆಪಿ ಸದಸ್ಯರು ಗೋಮೂತ್ರ ಸಿಂಪಡಿಸಿದ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, 'ನಾನು ಎಲ್ಲೆಲ್ಲೆ ಹೋಗುತ್ತೇನೊ ಅಲ್ಲೆಲ್ಲಾ ಬಿಜೆಪಿಗರು ಹೀಗೆ ಶುದ್ಧೀಕರಣ ಮಾಡುತ್ತಾರಾ?' ಎಂದು ವ್ಯಂಗ್ಯವಾಡಿದ್ದಾರೆ.