ವೈದ್ಯಕೀಯ ಪರವಾನಿಗೆ ಇಲ್ಲದೇ ವೃತ್ತಿಯಲ್ಲಿ ತೊಡಗಿದ್ದ ಆರೋಪ: ನಕಲಿ ವೈದ್ಯನ ಬಂಧನ
ಕೊಳ್ಳೇಗಾಲ,ಜ.19: ವೈದ್ಯಕೀಯ ಪರವಾನಿಗೆ ಪಡೆಯದೇ ವೃತ್ತಿಯಲ್ಲಿ ತೊಡಗಿದ್ದ ನಕಲಿ ವೈದ್ಯನನ್ನು ಜಿಲ್ಲಾ ಆರೋಗ್ಯ ಇಲಾಖೆಯ ಹಾಗೂ ಪೊಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ದೇವಾಂಗ ಪೇಟೆಯ ಬೀದಿಯಲ್ಲಿ ಸುಮಾರು ದಿನಗಳಿಂದ ನಕಲಿ ವೈದ್ಯಾಧಿಕಾರಿ ಮನೀಷ್ಕುಮಾರ್ ಅಕ್ರಮವಾಗಿ ಮೂಲವ್ಯಾದಿ ಪಾರ್ವತಿ ಕ್ಲಿನಿಕ್ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೆರೆಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ಪ್ರಸಾದ್ ತಂಡ ಮತ್ತು ಪೊಲೀಸ್ರು ದಾಳಿ ನಡೆಸಿದ್ದಾರೆ.
ನಂತರ ಜಿಲ್ಲಾ ವೈದ್ಯಾಧಿಕಾರಿ ಡಾ. ಪ್ರಸಾದ್ ಮಾತನಾಡಿ, ಮೂಲವ್ಯಾಧಿ ಹೆಸರಿನಲ್ಲಿ ಕ್ಲಿನಿಕ್ಗೆ ಬರುವ ರೋಗಿಗಳಿಂದ ಹಣ ವಸೂಲಿ ಮಾಡಿ ಅಕ್ರಮವಾಗಿ ಚಿಕಿತ್ಸೆ ನೀಡಿ ಅವರಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದ. ಅವರಿಗೆ ವೈದ್ಯಕೀಯ ಇಲಾಖೆಯ ಅನುಮತಿ ಪಡೆಯದೆ ಅಕ್ರಮ ಚಿಕಿತ್ಸೆ ನೀಡುತ್ತಿದ್ದ. ನಂತರ ವಿಚಾರಣೆಯ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಕಲ್ಕತ್ತಾ ಮೂಲದ ನಕಲಿ ವೈದ್ಯ ಮನೀಷ್ ಕುಮಾರ್ ಹಾಗೂ ಸಹಾಕಯ ಸುವಾಗ್ ಮೇಲೆ ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ದಾಳಿಯಲ್ಲಿ ಡಾ.ಅನಿಲ್ಕುಮಾರ್, ಡಾ.ನಾಗರಾಜು, ಡಾ.ವೇಣುಗೋಪಾಲ್, ಸರ್ಕಲ್ ಇನ್ಸ್ ಸೆಕ್ಟರ್ ರಾಜಣ್ಣ, ಹಾಗೂ, ಪಿ.ಎಸ್.ಐ ಎಂ.ನಾಯಕ್, ಪಿ.ಎಸ್.ಐ ಮಂಜುನಾಥ್, ಪೇದೆಗಳಾದ ರಘು, ಕಾಮರಾಜು ಇದ್ದರು.