100 ಕೋಟಿ ರೂ.ವೆಚ್ಚದಲ್ಲಿ ಅಂಬಿಗರ ಚೌಡಯ್ಯ ಪೀಠ ಸ್ಥಾಪನೆ:ಸಚಿವ ವಿನಯಕುಲಕರ್ಣಿ
ಧಾರವಾಡ, ಜ.21: ರಾಜ್ಯ ಸರಕಾರವು 100 ಕೋಟಿ ರೂ.ವೆಚ್ಚದಲ್ಲಿ ಅಂಬಿಗರ ಚೌಡಯ್ಯನವರ ಪೀಠವನ್ನು ಸ್ಥಾಪಿಸಲು ಮುಂದಾಗಿದ್ದು, ಈಗಾಗಲೆ 32 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯಕುಲಕರ್ಣಿ ತಿಳಿಸಿದ್ದಾರೆ.
ರವಿವಾರ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಕ್ಕೆ ಅಂಬಿಗರ ಚೌಡಯ್ಯನವರ ಕೊಡುಗೆ ಅನನ್ಯವಾದದ್ದು. ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಮುಂದಾಗಿದ್ದರು. ಅವರ ತತ್ವಾದರ್ಶಗಳು ಮತ್ತು ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಾಜದಲ್ಲಿನ ಅಸ್ ತೆ ನಿವಾರಣೆ ಮಾಡಲು ಅಂಬಿಗರ ಚೌಡಯ್ಯನವರು ಸಾಕಷ್ಟು ಪರಿಶ್ರಮಿಸಿದ್ದಾರೆ. ಅಂಬಿಗರ ಚೌಡಯ್ಯನವರು ಬಸವಣ್ಣನವರ ಆತ್ಮೀಯರಾಗಿದ್ದರು. ಆಗಿನ ಕಾಲದಲ್ಲಿದ್ದ ಅನಾಚಾರ, ಆಪಾದನೆ, ಟೀಕೆಗಳನ್ನು ಮೆಟ್ಟಿನಿಂತವರು ಎಂದು ಅವರು ತಿಳಿಸಿದರು.
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ನೇರ ನುಡಿ ಹಾಗೂ ದಿಟ್ಟ ನಿರ್ಧಾರದ ಅಂಶಗಳನ್ನು ಕಾಣಬಹುದಾಗಿದೆ. ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಮಾಜದವರು ಮುಂದಾಗಬೇಕಿದೆ. ಯುವಕರು ಅವರ ಜೀವನವನ್ನು ಅರಿತುಕೊಳ್ಳಬೇಕು ಎಂದು ವಿನಯಕುಲಕರ್ಣಿ ಕರೆ ನೀಡಿದರು.
ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಜಯಂತಿಗಳ ಆಚರಣೆಯಿಂದ ಅವರ ಸಾಧನೆಗಳನ್ನು ನೆನಪಿಸಿಕೊಳ್ಳಬಹುದಾಗಿದೆ. ಮಹಾನುಭಾವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು. ಅಂಬಿಗರ ಚೌಡಯ್ಯನವರು ಸಮಾಜಕ್ಕೆ ಹತ್ತಿರವಾದ ವಚನಗಳನ್ನು ರಚಿಸಿದ್ದಾರೆ. ಇಂದಿಗೂ ಅವರ ತತ್ವಗಳು, ಸಂದೇಶಗಳು ಪ್ರಚಲಿತವಾಗಿವೆ. ಯುವಕರು ಸಾಧಕರ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದರು.
ಅಂಬಿಗರ ಚೌಡಯ್ಯನವರ ಸಾಮಾಜಿಕ ಕೊಡುಗೆಗಳ ಕುರಿತು ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವ ವಿನಯ ಕುಲಕರ್ಣಿ ‘ಅಂಬಿಗರ ಚೌಡಯ್ಯನವರ ಮಿನಿ ಕ್ಯಾಲೆಂಡರ್’ ಬಿಡುಗಡೆಗೊಳಿಸಿದರು. ಅಲ್ಲದೆ, ಸಮಾಜದ ಗಣ್ಯರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ, ಸಮಾಜದ ಮುಖಂಡರಾದ ಮಂಜುನಾಥ ಭಿಮ್ಮಕ್ಕನವರ, ಮಾರುತಿ ಕಬ್ಬೇರ, ಗುರಪ್ಪಜಡ್ಡಿ, ಯಲ್ಲಪ್ಪಸುಣಗಾರ, ಮನೋಜಕುಮಾರ ಕರ್ಜಗಿ, ಅರವಿಂದ ಎಗನಗೌಡರ, ಮಹಾದೇವಪ್ಪ ಸುಣಗಾರ, ಹನುಮಂತಪ್ಪ ಇಟಗಿ, ವಿಮಾ ಬಳ್ಳಾರಿ, ಶಿವಾನಂದ ಜಾಲರ, ಹನುಮಂತಪ್ಪಅಂಬಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.