ಪಿ.ಎಚ್.ಸಿ.ಗಳಲ್ಲಿ ಆಯುರ್ವೇಧ ವೈದ್ಯರು ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ: ಡಾ.ಸಂಗಮೇಶ್
ಮೈಸೂರು,ಜ.22: ಆಲೋಪತಿ ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗುವುದಿಲ್ಲ. ಆಯುರ್ವೇದ ವೈದ್ಯರು ಹೋಗಲು ಸಿದ್ಧರಿದ್ದಾರೆ ಆದರೆ ಅವರಿಗೂ ಬಿಡುತ್ತಿಲ್ಲ. ಆಲೋಪತಿ ವೈದ್ಯರಿಗಿಂತ ಆಯುರ್ವೇದ ವೈದ್ಯರಿಗೆ ಹೆಚ್ಚು ಬುದ್ದಿವಂತಿಕೆ ಇರುತ್ತದೆ ಎಂದು ಆಯುರ್ವೇದ ಫೆಡರೇಷನ್ ಆಫ್ ಇಂಡಿಯಾದ ಮೈಸೂರು ಜಿಲ್ಲಾಧ್ಯಕ್ಷ ಡಾ.ಸಂಗಮೇಶ್ ತಿಳಿಸಿದರು.
ಆಲೋಪತಿಯಲ್ಲಿ ದೇಹದ ಒಂದು ಭಾಗಕ್ಕೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ ಯಾವುದಾದರು ಜಾಗದಲ್ಲಿ ನೋವು ಎಂದರೆ ಅಷ್ಟಕ್ಕೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಅದು ಜನರಿಗೆ ತಕ್ಷಣಕ್ಕೆ ಆರಾಮ ಎನ್ನಿಸುತ್ತದೆ. ಆದರೆ ಆಯುರ್ವೇದದಲ್ಲಿ ಹಾಗಲ್ಲ, ನಾವು ಕೊಡುವ ಔಷಧಿ ಮನುಷ್ಯನ ಎಲ್ಲಾ ಭಾಗಗಳಿಗೂ ತಲುಪುತ್ತದೆ ಎಂದರು.
ರಾಜ್ಯದಲ್ಲಿ 2500 ಪ್ರಾಥಮಿಕ ಕೇಂದ್ರಗಳಿದ್ದು, ಎನ್.ಎಚ್.ಎಂ ಅಡಿಯಲ್ಲಿ 850 ಪ್ರಾಥಮಿಕ ಕೇಂದ್ರಗಳಲ್ಲಿ ಆಯುರ್ವೇದ ವೈದ್ಯರುಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಯಾವುದೇ ಭದ್ರತೆ ಇಲ್ಲ. ಹಾಗೆಯೇ ರಾಷ್ಟ್ರೀಯ ಬಾಲ ಸುರಕ್ಷಾ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರುಗಳಿಗೆ 40 ಸಾವಿರ ವೇತನ ನೀಡಲಾಗುತ್ತಿದೆ. ಎನ್.ಎಚ್.ಎಂ ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ 20 ಸಾವಿರ ವೇತನ ನೀಡಲಾಗುತ್ತಿದೆ. ಇದರ ತಾರತಮ್ಯ ತಪ್ಪಬೇಕು. ಸರ್ಕಾರ ಅಯುರ್ವೇದ ವೈಧ್ಯರ ಪರ ಇದೆ. ಆದರೆ ಆಲೊಪತಿ ವೈದ್ಯರು ಅದಕ್ಕೆ ಅವಕಾಶ ಕೊಡುತ್ತಿಲ್ಲ. ಸರ್ಕಾರ ಆಯುರ್ವೇದ ವೈದ್ಯರುಗಳಿಗೆ ಆಲೋಪತಿ ಬಗ್ಗೆ ತಿಳಿದುಕೊಳ್ಳಲು ಕನಿಷ್ಟ ಆರು ತಿಂಗಳ ತರಬೇತಿಯನ್ನಾದರೂ ನೀಡಬೇಕು ಎಂದು ಒತ್ತಾಯಿಸಿದರು.
ಆಯುರ್ವೇದ ಒಂದನ್ನೆ ಇಟ್ಟು ಕೊಂಡು ಆಯುರ್ವೇದ ವೈದ್ಯರು ಕೆಲಸಮಾಡಲು ಸಾಧ್ಯವಿಲ್ಲ. ಹಾಗಾಗಿ ಬಿಎಎಂಎಸ್ ತರಬೇತಿ ಹೊಂದುವವರಿಗೆ ಕನಿಷ್ಠ ಇಷ್ಟು ತಿಂಗಳುಗಳ ಕಾಲ ಎಂದು ಆಲೋಪತಿ ತರಬೇತಿ ನೀಡಬೇಕು. ಜೊತೆಗೆ ಸ್ನಾತಕೋತ್ತರ ಆಯುರ್ವೇದ ತಜ್ಞರು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದರೆ ಆಲೋಪತಿಯ ಅಗತ್ಯ ಇರುತ್ತದೆ ಹಾಗಾಗಿ ಅವರಿಗೆ ಆಲೋಪತಿ ಬಗ್ಗೆ ತರಬೇತಿ ಅಗತ್ಯ ಇದೆ.
-ಡಾ.ಶಶಿಧರ್, ಎನ್.ಐ.ಎಮ್.ಎ ಮೈಸೂರು ಜಿಲ್ಲಾಧ್ಯಕ್ಷ