ಹನೂರು: ಸಿಸಿರಸ್ತೆ, ಚರಂಡಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿಪೂಜೆ
ಹನೂರು,ಜ.23: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಅತಿ ಹೆಚ್ಚು ಅನುದಾನ ಪಡೆದ ಕ್ಷೇತ್ರದಲ್ಲಿ ಹನೂರು ಕ್ಷೇತ್ರ ಪ್ರಥಮ ಸ್ಥಾನವೆಂದು ಸ್ವತಃ ಸಚಿವರಾದ ಆಂಜನೇಯ ಅವರೇ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ನರೇಂದ್ರ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ 1.95 ಕೋಟಿ ವೆಚ್ಚದಲ್ಲಿ ಮಂಜೂರಾಗಿರುವ ಸಿಸಿರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಅಜ್ಜೀಪುರ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ನರೇಂದ್ರ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ದದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಂಖ್ಯೆಗನುಗುಣವಾಗಿ ಅನುದಾನ ಒದಗಿಸುವ ಯೋಜನೆಯನ್ನು ಜಾರಿಗೊಳಿಸಿದ್ದು, ಇದರನ್ವಯ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ 27,600ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಅನುದಾನದಡಿ ಎಸ್ ಸಿ ಮತ್ತು ಎಸ್ಟಿ ಜನಾಂಗದವರು ವಾಸಿಸುವ ಬಡಾವಣೆಗಳಿಗೆ ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಅಲ್ಲದೆ ಆಯಾ ಸಾಲಿನ ಅನುದಾನ ಖರ್ಚಾಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಕ್ರಿಮಿನಲ್ ಮೊಕದ್ದಮೆ ಹೂಡುವಂತಹ ಕಠಿಣ ಕಾನೂನನ್ನು ಸಹ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಸಾಂಕೇತಿಕವಾಗಿ ಭೂಮಿಪೂಜೆ: ಕ್ಷೇತ್ರ ವ್ಯಾಪ್ತಿಯ ಗೋಪಿಶೆಟ್ಟಿಯೂರು ಗ್ರಾಮಕ್ಕೆ 22 ಲಕ್ಷ, ರಾಮಾಪುರ ಗ್ರಾಮಕ್ಕೆ 10 ಲಕ್ಷ, ಅಜ್ಜೀಪುರ ಗ್ರಾಮಕ್ಕೆ 34 ಲಕ್ಷ, ಪಳನಿಮೇಡು ಗ್ರಾಮಕ್ಕೆ 10 ಲಕ್ಷ, ಗೋಪಿನಾಥಂ ಗ್ರಾಮಕ್ಕೆ 16.19, ಕುರುಬರದೊಡ್ಡಿ ಗ್ರಾಮಕ್ಕೆ 16.72, ಕೂಡ್ಲೂರು ಗ್ರಾಮಕ್ಕೆ 16 ಲಕ್ಷ, ಎಂ.ಟಿ.ದೊಡ್ಡಿ ಗ್ರಾಮಕ್ಕೆ 10 ಲಕ್ಷ, ಕೆ.ಗುಂಡಾಪುರ ಗ್ರಾಮಕ್ಕೆ 10 ಲಕ್ಷ, ಮ.ಬೆಟ್ಟಕ್ಕೆ 17.95 ಲಕ್ಷ, ಕೀರೆಪಾತಿ ಗ್ರಾಮಕ್ಕೆ 14 ಲಕ್ಷ, ಪಾಲಾರ್, ಆನೆಹೊಲ,ಲಕ್ಷ್ಮಯ್ಯನದೊಡ್ಡಿ ವಡಕೆಹಳ್ಳ, ಹೂಗ್ಯ, ದೊಮ್ಮನಗದ್ದೆ, ಪೂಜಾರಿಭೋವಿದೊಡ್ಡಿ, ಮಾರಳ್ಳಿ, ಬಿದರಳ್ಳಿ,ಗ್ರಾಮಗಳಿಗೆ ತಲಾ 10 ಲಕ್ಷರೂ ವೆಚ್ಚದಲ್ಲಿ ಸಿಸಿರಸ್ತೆ ಮತ್ತು ಚರಂಡಿ ಕಾಮಗಾರಿಗಳು ಮಂಜೂರಾಗಿದೆ ಎಂದು ತಿಳಿಸಿದರು.
ಕಾಮಗಾರಿ ಉತ್ತಮವಾಗಿರಲಿ: ಪ್ರತಿ ಗ್ರಾಮದಲ್ಲಿಯೂ ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದು, ಕನಿಷ್ಠ 25-30 ವರ್ಷಗಳು ಬಾಳಿಕೆ ಬರುವಂತಿರಬೇಕು. ಒಂದೊಮ್ಮೆ ಗುಣಮಟ್ಟದಲ್ಲಿ ಯಾವುದಾದರೂ ಲೋಪದೋಷ ಕಂಡು ಬಂದಲ್ಲಿ ಯಾವುದೇ ಮುಲಾಜಿಗೂ ಒಳಗಾಗದೆ ತಮಗೇ ಮಾಹಿತಿ ನೀಡಿ. ಪ್ರತಿಯೊಂದು ಗ್ರಾಮದಲ್ಲಿಯೂ ಆಯಾ ಗ್ರಾಮದ ಮುಖಂಡರುಗಳು ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಲಾಗುತ್ತಿದೆಯೇ, ಕ್ಯೂರಿಂಗ್ ಸಮರ್ಪಕವಾಗಿ ಮಾಡಲಾಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಹಾಗೂ ಕಾಮಗಾರಿ ಕಳಪೆ ಎಂದು ಕಂಡುಬಂದಲ್ಲಿ ಆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ರಾಜು, ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಜಿ.ಪಂ ಸದಸ್ಯರಾದ ಬಸವರಾಜು, ಇರ್ಷಾದ್ ಭಾನು, ತಾ.ಪಂ ಸದಸ್ಯರಾದ ನಟರಾಜು, ಸುಮತಿ, ಗ್ರಾ.ಪಂ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಚಿತ್ರಾ, ಸದಸ್ಯರಾದ ಸಿದ್ದರಾಜು, ಕೆಂಪರಾಜು, ತಾ.ಪಂ ಮಾಜಿ ಅಧ್ಯಕ್ಷ ವೆಂಕಟರಮಣ ನಾಯ್ಡು, ಮುರುಡೇಶ್ವರ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ಚಿಕ್ಕತಮ್ಮಯ್ಯ, ಜಯರಾಜ್ ಇನ್ನಿತರರು ಹಾಜರಿದ್ದರು.