ಕೊಳ್ಳೇಗಾಲ: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ
ಕೊಳ್ಳೇಗಾಲ,ಜ.23: ವಿದ್ಯಾರ್ಥಿಗಳು ಆಯ್ಕೆಮಾಡಿಕೊಳ್ಳುವಂತಹ ವಿಶ್ವದಲ್ಲಿನ ಎಲ್ಲಾ ವಿಷಯಗಳು ನಮ್ಮ ಮಕ್ಕಳ ಅಂಗೈಲ್ಲಿ ಇರಬೇಕೆಂಬ ಕನಸನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಲ್ಯಾಪ್ಟಾಪ್ ವಿತರಣೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಜಯಣ್ಣ ಅವರು ಹೇಳಿದರು.
ಪಟ್ಟಣದ ಮಹದೇಶ್ವರ ಸರ್ಕಾರಿ ಕಾಲೇಜಿನಲ್ಲಿ ಮಂಗಳವಾರ ಎಸ್ಸಿ ಮತ್ತು ಎಸ್ಟಿ ಜನಾಂಗದ 112 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಿ ನಂತರ ಅವರು ಮಾತನಾಡಿದರು.
ಮುಂದಿನ ಸಾಲಿನಲ್ಲಿ ಎಲ್ಲಾ ವರ್ಗದ ಮಕ್ಕಳಿಗೂ ಲ್ಯಾಪ್ಟಾಪ್ ವಿತರಣೆ ಮಾಡಬೇಕೆಂಬ ದೃಷ್ಟಿಯಿಂದ ಈ ಸಾಲಿನಲ್ಲಿ ಪಿಯುಸಿಯಲ್ಲಿ ಉತ್ತೀರ್ಣರಾದ ಎಸ್ಸಿ ಎಸ್ಟಿ ಮಕ್ಕಳಿಗೆ ಸೀಮಿತವಾಗಿ ವಿತರಣೆ ಮಾಡಲಾಗಿದೆ ಎಂದರು.
ಪಟ್ಟಣದ ಪ್ರದೇಶದ ಮಕ್ಕಳಿಗಿಂತ ಹಿಂದೆ ಬೀಳುವ ಕಳವಳ ಗ್ರಾಮೀಣ ಮಕ್ಕಳಲ್ಲಿ ಉಂಟಾಗದ ರೀತಿಯಲ್ಲಿ ಎಲ್ಲಾ ಮಕ್ಕಳ ಬೆಳವಣಿಗೆಯ ದೃಷ್ಠಿಯಿಂದ ಸರ್ಕಾರ ಈ ಯೋಜನೆ ಇಟ್ಟುಕೊಂಡಿದೆ. ಇದರ ಪ್ರಯೋಜನವನ್ನು ಪ್ರತಿಯೊಂದು ಮಕ್ಕಳು ಸದುಪಯೋಗ ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ಶಿವಾನಂದ, ಸ್ಥಾಯಿ ಸಮಿತಿ ಸದಸ್ಯ ಹರ್ಷ, ಸದಸ್ಯರಾದ ಮಲ್ಲಿಕಾರ್ಜುನ, ರಾಘವೇಂದ್ರ, ಬಸ್ತೀಪುರ ಅಂಬೇಡ್ಕರ್ ಸಂಘದ ಅಧ್ಯಕ್ಷ ರವಿ, ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಅಣ್ಣಾದ್ರಯ್ಯ, ಎ.ಡಿ.ಶಿವಪ್ರಕಾಶ್, ಪ್ರಾಶುಂಪಾಲ ಪುಟ್ಟಲಿಂಗ, ಉಪನ್ಯಾಸಕ ರಾಜಶೇಖರ್, ರವಿಶಂಕರ್ ಹಾಗೂ ಇನ್ನಿತರರದ್ದರು.