ವಿವಾಹ ವಂಚನೆ ಆರೋಪ: ಎರಡು ಮನೆಯವರಿಂದ ಹೊಡೆದಾಟ
ಮಡಿಕೇರಿ, ಜ.23 :ವಿವಾಹವಾಗಿ ವಂಚಸಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆ ಯುವಕನೊಬ್ಬನಿಗೆ ಧರ್ಮದೇಟು ನೀಡಿದ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಗುರು ಎಂಬಾತ ಯಮುನಾ ಎಂಬಾಕೆಯನ್ನು ವಿವಾಹವಾಗಿ ಕೆಲಕಾಲ ಸಂಸಾರ ನಡೆಸಿ ಈಗ ವಿವಾಹವೇ ಆಗಿಲ್ಲವೆಂದು ನಿರ್ಲಕ್ಷಿಸಿದ್ದಾನೆ ಎಂದು ಹೇಳಲಾಗಿದೆ. ಯುವಕನ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಯಮುನಾ ದೂರು ದಾಖಲಿಸಿದ್ದಾರೆ.
ಆದರೆ ಪೊಲೀಸರು ಯುವಕನ ಪರವಾಗಿದ್ದಾರೆ ಎಂದು ಆರೋಪಿಸಿರುವ ಮಹಿಳೆ ಇಂದು ಮುಂಜಾನೆ ಗುರುವಿನ ಮನೆಗೆ ತೆರಳಿ ಹಿಗ್ಗಾಮುಗ್ಗ ಥಳಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭ ಯುವಕನ ಮನೆಯವರು ಹಾಗೂ ಮಹಿಳೆಯ ಕುಟುಂಬದ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಎರಡೂ ಕುಟುಂಬದವರು ಬಡಿದಾಡಿಕೊಂಡರು. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಯುವಕನ ಕುಟುಂಬದ ಸದಸ್ಯರು ತಳ್ಳಿದ ಪರಿಣಾಮ ನೆಲಕ್ಕೆ ಬಿದ್ದ ಯಮುನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.