ಹೊನ್ನಾವರ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಹೊನ್ನಾವರ,ಜ.29: ವಿದ್ಯಾರ್ಥಿ ಜೀವನವು ಬಂಗಾರದ ಜೀವನ, ವಿದ್ಯಾರ್ಥಿಗಳು ಕಪ್ಪು ಚುಕ್ಕೆ ಬಾರದಂತೆ ಎಚ್ಚರ ವಹಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ಸಲಹೆ ನೀಡಿದರು.
ಹೊನ್ನಾವರದ ದಿ. ಮೋಹನ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಬಹುಮುಖ್ಯವಾದುದು. ಯುವಜನತೆ ದೇಶದ ಬೆನ್ನೆಲುಬು. ವಾಟ್ಸಫ್, ಪೆಸ್ಬುಕ್ ನಿಂದ ದೂರವಿದ್ದು ಒಳ್ಳೆಯ ಆಚಾರ, ವಿಚಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಸಿಡಿಸಿ ಸದಸ್ಯ ಹುಸೇನ್ ಖಾದ್ರಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ದಿನ ಕಳೆಯುವುದಕ್ಕಾಗಿ ಕಾಲೇಜಿಗೆ ಬರಬಾರದು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಹಿಂದುಳಿದವರು ಮುಂಚೂಣಿಗೆ ಬಂದು ಉನ್ನತ ಸ್ಥಾನವನ್ನು ಗಳಿಸಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಡಿ.ಮಡಿವಾಳ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಹೊಸಬಯ್ಯ ಪಟಗಾರ ಕಾಲೇಜು ಮತ್ತು ವಿದ್ಯಾರ್ಥಿಗಳ ಸಾಧನೆ ಕುರಿತು ಮಾತನಾಡಿದರು.
ಉಪನ್ಯಾಸಕ ಪ್ರಭಾಕರ ನಾಯ್ಕ ಸ್ವಾಗತಿಸಿದರು. ದಾಕ್ಷಾಯನಿ ನಾಯ್ಕ ವರದಿ ವಾಚಿಸಿದರು. ಎಸ್.ಎಂ.ಭಟ್ಟ ನಿರ್ವಹಿಸಿದರು. ಸತೀಶ ವಿ. ನಾಐಕ ವಂದನಾರ್ಪಣೆ ಮಾಡಿದರು. ಉಪನ್ಯಾಸಕರಾದ ರಾಜೇಶ ಶೇಟ್, ಜಯಶ್ರೀ ಬಿ., ವೀಣಾ ಪಾಟೀಲ್, ವಿನೋದ ಹೆಗಡೆ, ದೇವರಾಜ ಕರ್ಕಿ, ಬಿ.ಕೃಷ್ಣ, ಅರುಣ ನಾಯ್ಕ ಉಪಸ್ಥಿತರಿದ್ದರು.