ಬಳ್ಳಾರಿಗೆ ತಲುಪಿದ 'ರಾಹುಲ್ ವಿಶೇಷ ಬಸ್'
ಬಳ್ಳಾರಿ, ಫೆ.9: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಸವಾಲಾಗಿದ್ದ ಗುಜರಾತ್ ಚುನಾವಣೆಯ ವೇಳೆ ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ಬಳಸಿದ್ದ 'ವಿಶೇಷ ಬಸ್' ಇದೀಗ ಬಳ್ಳಾರಿಗೆ ತಲುಪಿದೆ.
ದೆಹಲಿಯಲ್ಲಿ ನೊಂದಣಿಯಾಗಿರುವ ಈ ಬಸ್, ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ತಕ್ಕಂತೆ ತಯಾರಿ ಮಾಡಲಾಗಿದೆ. ಶುಕ್ರವಾರ ಬೆಂಗಳೂರಿನಿಂದ ಹೊರಟ ಈ ಬಸ್ ಸಂಪೂರ್ಣ ಪೊಲೀಸ್ ಬೆಂಗಾವಲಿನೊಂದಿಗೆ ಚಿತ್ರದುರ್ಗ ರಸ್ತೆ ಮೂಲಕ ಬಳ್ಳಾರಿ ತಲುಪಿದೆ.
ಬಸ್ ನ ವಿಷೇಶತೆಗಳು: ಹವಾನಿಯಂತ್ರಿತ ಈ ಬಸ್ನಲ್ಲಿ ಆರಾಮವಾಗಿ ಕುಳಿತುಕೊಳ್ಳುವ ವ್ಯವಸ್ಥೆ, ಮಲಗಿ ವಿಶ್ರಾಂತಿ ಪಡೆಯಲು ಹಾಸಿಗೆ, ಶೌಚಾಲಯ ದ ವ್ಯವಸ್ಥೆಯೂ ಇದೆ.
ಫೆ.10 ರಂದು ರಾಜ್ಯಕ್ಕೆ: ಫೆ.10 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದು, ನಾಲ್ಕು ದಿನಗಳ ಕಾಲ ರಾಜ್ಯ ಪ್ರವಾಸ ನಡೆಸಲಿದ್ದಾರೆ. ಜಿಂದಾಲ್ ಏರ್ ಪೋರ್ಟ್ಗೆ ಬಂದಿಳಿಯಲಿರುವ ರಾಹುಲ್ ಗಾಂಧಿ ಹೊಸಪೇಟೆಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಬಸ್ನಲ್ಲಿ ಕೊಪ್ಪಳದ ಮುನಿರಾಬಾದ್ ಪ್ರವಾಸಕ್ಕೆ ತೆರಳಲಿದ್ದು, ಮಾರ್ಗ ಮಧ್ಯೆ ಉಳಿಗೆಮ್ಮ ದೇಗುಲಕ್ಕೆ, ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಸಂಜೆ 6 ಕ್ಕೆ ಕುಕನೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿ ಅಂದು ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.