ಮಡಿಕೇರಿ: ವಿದ್ಯುತ್ ಸ್ಪರ್ಷದಿಂದ ಕಾರ್ಮಿಕ ಮೃತ್ಯು; ಮಾಲಿಕನ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ಮಡಿಕೇರಿ,ಫೆ.13: ವಿದ್ಯುತ್ ಸ್ಪರ್ಷದಿಂದ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಸಿದ್ದಾಪುರ ಸಮೀಪ ಹಚ್ಚಿನಾಡು ಗ್ರಾಮದ ಕಾಫಿತೋಟದಲ್ಲಿ ನಡೆದಿದೆ.
ಮೃತ ಸ್ವಾಮಿ(21) ಎಂಬಾತನ ತಂದೆ ಜವರಶೆಟ್ಟಿ ನೀಡಿದ ದೂರಿನ ಹಿನ್ನೆಲೆ ತೋಟದ ಮಾಲೀಕನ ವಿರುದ್ದ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಚ್ಚಿನಾಡು ಗ್ರಾಮದಲ್ಲಿ ಸೋಮವಾರ ನಂಜನಗೂಡು ಮೂಲದ ಕಾರ್ಮಿಕರೊಂದಿಗೆ ಪೂವಣ್ಣ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಮರವೇರಿ ಕಾಳು ಮೆಣಸು ಕುಯ್ಯುತ್ತಿದ್ದ ಸಂದರ್ಭ ಏಣಿಗೆ ವಿದ್ಯುತ್ ತಂತಿ ತಗುಲಿ ಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಕಾರ್ಮಿಕನ ಸಾವಿಗೆ ತೋಟದ ಮಾಲಿಕನ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಇತರ ಕಾರ್ಮಿಕರು ಶವಗಾರದ ಎದುರು ಪ್ರತಿಭಟನೆ ನಡೆಸಿ, 1 ಲಕ್ಷ ರೂ.ಪರಿಹಾರ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನಕಾರರ ಒತ್ತಡಕ್ಕೆ ಮಣಿದು ತೋಟದ ಮಾಲಿಕ 1ಲಕ್ಷ ರೂ. ಪರಿಹಾರ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರುಗಳಾದ ಪಿ.ಆರ್.ಭರತ್, ಮಹದೇವ, ರಮೇಶ್, ಎನ್.ಡಿ.ಕುಟ್ಟಪ್ಪ, ಮೈಸೂರು ಜಿಲ್ಲಾ ಬಿ ಜೆ ಪಿ ಹಿಂದುಳಿದ ವರ್ಗದ ಅಧ್ಯಕ್ಷ ಸೊಮಣ್ಣ, ನಂಜನಗೂಡು ತಾಲೂಕು ಪಂಚಾಯತ್ ಸದಸ್ಯ ಮೂಗುಶೆಟ್ಟರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.