ಕೆ.ಆರ್.ಪೇಟೆ: ಚಿರತೆ ದಾಳಿಗೆ ಇಬ್ಬರು ಯುವಕರಿಗೆ ಗಾಯ
ಕೆ.ಆರ್.ಪೇಟೆ,ಫೆ17: ತಾಲೂಕಿನ ಆದಿಹಳ್ಳಿ ಬಳಿಯ ಗ್ರಾಮಕ್ಕೆ ನುಗ್ಗಿದ ಚಿರತೆಯೊಂದು ಮಧ್ಯಾಹ್ನ 1.30 ಗಂಟೆ ಸಮಯದಲ್ಲಿ ಗ್ರಾಮದ ಸನಿಹದ ಹಳ್ಳದ ಬಳಿ ಬರುತ್ತಿದ್ದ ಇಬ್ಬರು ಯುವಕರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.
ಆದಿಹಳ್ಳಿ ಗ್ರಾಮದ ರವಿ ಮತ್ತು ಕಾಂತರಾಜ್ ಗಾಯಗೊಂಡ ಯುವಕರು ಎಂದು ತಿಳಿದು ಬಂದಿದ್ದು, ಯುವಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
'ಇಷ್ಟು ದಿನಗಳ ಕಾಲ ಸಾಕು ಪ್ರಾಣಿಗಳಾದ ಕುರಿ, ಮೇಕೆ, ನಾಯಿಗಳನ್ನು ರಾತ್ರಿ ವೇಳೆ ಕೊಂದು ತಿನ್ನುತ್ತಿದ್ದ ಚಿರತೆಗಳು ಇಂದು ಗ್ರಾಮದ ಯುವಕರ ಮೇಲೆ ದಾಳಿ ಮಾಡಿರುಯವುದು ಆತಂಕಕಾರಿ ವಿಷಯ. ಹಾಗಾಗಿ ಅರಣ್ಯಾಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಹಿಡಿಯುವ ಮೂಲಕ ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕು' ಎಂದು ಮಹಿಳಾ ಹೋರಾಟಗಾರ್ತಿ ಹಾಗೂ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ರಮೇಶ್ ಒತ್ತಾಯಿಸಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ, ಅರಣ್ಯ ವೀಕ್ಷಕರಾದ ಶಿವಸ್ವಾಮಿ, ನಾರಾಯಣಗೌಡ, ಶಂಕರೇಗೌಡ ಭೇಟಿ ನೀಡಿದ್ದಾರೆ.