ಅನಾಚಾರ ತಡೆಯಲು ಮಹಾನ್ ಪುರುಷರು ಜನ್ಮ ತಾಳುತ್ತಾರೆ: ಶ್ರವಣಬೆಳಗೊಳದಲ್ಲಿ ನರೇಂದ್ರ ಮೋದಿ
ಶ್ರವಣಬೆಳಗೊಳ,ಫೆ.19: ಸಮಾಜದಲ್ಲಿ ಅನಾಚಾರದ ತಡೆದು ನಾಗರಿಕ ಸಮಾಜ ಕಟ್ಟಲು ಕಾಲ ಕಾಲಕ್ಕೆ ಮಹಾನ್ ವ್ಯಕ್ತಿಗಳು ದೇಶದಲ್ಲಿ ಜನ್ಮತಾಳಿ ಪರಿವರ್ತನೆಗೆ ನಾಂದಿಹಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸೋಮವಾರ ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಸ್ವಾಮಿಯ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ವಿಂಧ್ಯಗಿರಿಯಲ್ಲಿ ನೂತನವಾಗಿ ನಿರ್ಮಿಸಿರುವ ಮೆಟ್ಟಿಲುಗಳು ಮತ್ತು ಬಾಹುಬಲಿ ಜನರಲ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಯ ಬದಲಾದಂತೆ ಸಮಾಜದ ಜೀವನದಲ್ಲೂ ಬದಲಾವಣೆಯಾಗುವುದು ಈ ದೇಶದ ಪರಂಪಯಾಗಿದೆ. ಇದು ಭಾರತದ
ವಿಷೇಶತೆಯೂ ಆಗಿದೆ ಎಂದರು. ಸಮಾಜದಲ್ಲಿ ಅನಾಚಾರ ವ್ಯಾಪಿಸಿದಾಗ, ಕೆಲವರು ಅದಕ್ಕೆ ಪ್ರಚೋದನೆ ನೀಡಿದ ಸಂದರ್ಭದಲ್ಲಿ ಈ ಸಮಾಜದ ಸಿದ್ದ ಪುರುಷರು, ಸಂತ ಪುರುಷರು, ಮುನಿಗಳು, ಅಚಾರ್ಯ ಭಗವಂತರು, ಜನ್ಮತಾಳಿ ಸಮಾಜವನ್ನು ಸರಿದಾರಿಗೆ ತಂದಿದ್ದಾರೆ.ಅನಾಗರಿಕತೆಯಿಂದ ನಾಗರೀಕತೆಯ ಕಡೆ ಬದುಕಲು ಪ್ರೇರಣೆ ನೀಡಿದ್ದಾರೆ ಎಂದರು.
12 ವರ್ಷಗಳಿಗೊಮ್ಮೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಾದು ಸಂತರು, ಋಷಿಮುನಿಗಳು ಒಂದೆಡೆ ಸೇರಿ ಸಮಾಜ ಚಿಂತನೆ ನಡೆಸುತ್ತಾರೆ. ಸಮಾಜವನ್ನು ಕಟ್ಟುವ ಬಗ್ಗೆ, ಸಮಾಜ ಕಟ್ಟಲು ಯಾವದಾರಿಯಲ್ಲಿ ಸಾಗಬೇಕು ಎಂಬುವುದರ ಬಗ್ಗೆ ಚಿಂತಿಸುತ್ತಾರೆ. ಇದರ ಫಲಿತಾಂಶ ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಿಗುತ್ತದೆ ಎಂದರು.
ಆಚಾರ್ಯ ವರ್ಧಮಾನ ಸಾಗರ ಮಹಾರಾಜರು, ಸಂಘಸ್ಥ ಮುನಿಗಳು ಹಾಗೂ ಮಾತಾಜಿಯವರ ದರ್ಶನ ಪಡೆದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಮಠದೀಶ ಸ್ಚಸ್ತಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಇಂದು ಐತಿಹಾಸಿಕ ದಿನವಾಗಿದೆ. ಹಿಂದೆ ನಡೆದಿರುವ ಮಹಾಸ್ತಭಿಷೇಕದಲ್ಲಿ ರಾಜ ಮಹಾರಾಜರು ಭಾಗವಹಿಸಿದ್ದರು. ಆದರೆ ಇಂದಿನ ಈ ಮಹಾಮಸ್ತಕಾಭಿಷೇಕದಲ್ಲಿ ದೇಶದ ಪ್ರಧಾನಿ ಭಾಗವಹಿಸಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ವರ್ಧಾಮಾನ ಮಹರಾಜ್, ಪುಶ್ಪ ದಂತಿ ಮಹರಾಜ್ 108ವರ್ಧಮಾನಸಾಗರ ಮುನಿಮಹರಾಜರು, ರಾಜ್ಯಪಾಲ ವಜುಭಾಯಿ ಆರ್.ವಾಲಾ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಅನಂತಕುಮಾರ್, ಗೋಯಲ್, ಶಾಸಕ ಅಭಯ್ ಚಂದ್ರ ಜೈನ್, ರಾಷ್ಟ್ರೀಯ ಜೈನ್ ಅಧ್ಯಕ್ಷ ಸರಿತಾ ಜೈನ್, ಜಿಲ್ಲಾಧಿಕಾರಿ ರೊಹಿಣಿ ಸಿಂದೂರಿ, ಎಸ್ ಪಿ ರಾಹುಲ್ ಕುಮಾರ್, ಎಂಎಲ್ಸಿ ಗೋಪಾಲಸ್ವಾಮಿ, ಜಿ ಪಂ ಅಧ್ಯಕ್ಷ ಶ್ವೇತ ಪ್ರಸನ್ನ, ಶಾಸಕ ಬಾಲಕೃಷ್ಣ ಪಾಲ್ಗೊಂಡಿದ್ದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸ್ವಾಗತಿಸಿದರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಂದ ಪ್ರಧಾನಿ ನರೇಂದ್ರ ಮೋದಿಗೆ ಗೌರವ ಸಮರ್ಪಣೆ ನಡೆಯಿತು.