ದಾವಣಗೆರೆ: ಕನ್ನಡ ಕುರಿತ ಸಚಿವ ಹೆಗಡೆ ಹೇಳಿಕೆ ಖಂಡಿಸಿ ಎನ್ಎಸ್ಯುಐ ಪ್ರತಿಭಟನೆ
ದಾವಣಗೆರೆ,ಫೆ,19: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯವರನ್ನು ಬಿಟ್ಟರೆ ಉಳಿದ ಜಿಲ್ಲೆಯವರಿಗೆ ಕನ್ನಡ ತರ್ಜುಮೆ ಮಾಡುವ ಯೋಗ್ಯತೆ ಇಲ್ಲ ಎನ್ನುವ ಹೇಳಿಕೆ ನೀಡಿರುವುದನ್ನು ಖಂಡಿಸಿ ಎನ್ಎಸ್ಯುಐ ವತಿಯಿಂದ ಪ್ರತಿಭಟನೆ ನಡೆಯಿತು.
ಜಯದೇವ ವೃತ್ತದಲ್ಲಿ ಸಚಿವ ಹೆಗಡೆ ಭಾವಚಿತ್ರ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಅಲಿ ರೆಹಮತ್ ಪೈಲ್ವಾನ್, ವಿವಾದಾತ್ಮಕ ಹೇಳಿಕೆಗೆ ಕುಖ್ಯಾತಿ ಪಡೆದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ ಜನರನ್ನು ಬಿಟ್ಟರೆ, ಉಳಿದ ಕಡೆಯವರಿಗೆ ಕನ್ನಡ ತರ್ಜುಮೆ ಮಾಡುವ ಯೋಗ್ಯತೆ ಇಲ್ಲವೆಂಬ ಹೇಳಿಕೆ ನೀಡುವ ಮೂಲಕ ನಾಡಿನ ಸಮಸ್ತ ಕನ್ನಡಿಗರಿಗೆ ಅವಮಾನಿಸಿದ್ದಾರೆ ಎಂದ ಅವರು, ಕರ್ನಾಟಕದ ಒಂದೊಂದು ಪ್ರಾಂತ್ಯಕ್ಕೂ ಅದರದ್ದೇ ಆದ ಭಾಷೆಯ ಸೊಗಡಿದೆ. ಆ ಪ್ರಾಂತ್ಯದ ಅನುಸಾರ ಅಲ್ಲಿನ ಸೊಗಡು ಅದೇ ಭಾಗದ ಜನರ ನಾಲಿಗೆಯಲ್ಲಿರುತ್ತದೆ. ಆದರೆ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಯಾರನ್ನೋ ಓಲೈಸುವ, ಯಾರದ್ದೋ ಮೆಚ್ಚುಗೆ ಗಳಿಸುವುದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ರೀತಿ ಹೇಳಿಕೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಅನಂತಕುಮಾರ ಹೆಗಡೆ ವಿರುದ್ಧ ರಾಜ್ಯ, ರಾಷ್ಟ್ರಾದ್ಯಂತ ಎನ್ಎಸ್ಯುಐ ಸಂಘಟನೆ ಪ್ರತಿಭಟಿಸಬೇಕಾದೀತು ಎಂದು ಅವರು ಎಚ್ಚರಿಸಿದರು.
ಸಂಘಟನೆ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಎ.ಎಸ್. ತಾಹೀರ್, ಉಪಾಧ್ಯಕ್ಷ ನೂರ್ ಮಹಮ್ಮದ್, ಸಾದಿಕ್, ಕಾರ್ಯದರ್ಶಿಗಳಾದ ಉಸ್ಮಾನ್, ಸಾದ್, ವಜಾಹತ್, ಇಮ್ರಾನ್, ಯುವ ಕಾಂಗ್ರೆಸ್ ಮುಖಂಡರಾದ ಅಯಾಜ್, ಮುಕರಂ, ಮಜ್ದೂರ್ ಕಾಂಗ್ರೆಸ್ನ ಸ್ವಾಮಿ, ಅಫೋಜ್, ಸ್ವಾಮಿ, ವಜಾದ್, ಅಯಾಜ್ ಅಹಮ್ಮದ್, ತೆಹರೀಜ್, ಪ್ರಮೋದ್, ಕೌಶಿಕ್, ಸ್ವಾಮಿ ಪಟೇಲ್, ಗಿರಿಧರ್, ಉಸ್ಮಾನ್, ಮಲ್ಲಿಕಾರ್ಜುನ, ಸತೀಶ, ಸಮೀರ್ ಇದ್ದರು.