ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಕಲಚೇತನರ ಧರಣಿ
ಮಂಡ್ಯ, ಫೆ.23: ರೈಲಿನಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ನಗರದ ರೈಲ್ವೆ ನಿಲ್ದಾಣದ ಎದುರು ಧರಣಿ ನಡೆಸಿದರು.
ಎಲ್ಲಾ ರೈಲುಗಳಿಗೂ ರಿಯಾಯಿತಿಯನ್ನು ವಿಸ್ತರಿಸಬೇಕು. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ವ್ಯಾಖ್ಯಾನದಂತೆ ವರ್ಗೀಕರಿಸಿದ ಅಂಗವೈಕಲ್ಯತೆಯ ಮಾನದಂಡ ಹೊಂದಿರುವ ಎಲ್ಲ ವ್ಯಕ್ತಿಗಳಿಗೂ ರಿಯಾಯಿತಿ ವಿಸ್ತರಿಸಬೇಕು. ಎಲ್ಲ ಅಂಗವಿಕಲರಿಗೂ ಶೇ.75ರಷ್ಟು ಏಕರೂಪ ರಿಯಾಯಿತಿ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಅಂಗವಿಕಲರಿಗೆ ಬುಕ್ಕಿಂಗ್ಗೂ ರಿಯಾಯಿತಿ ನೀಡಬೇಕು. ಅಂಗವೈಕಲ್ಯತೆಯ ಪುರಾವೆ ಟಿಕೆಟ್ ಕಾಯ್ದಿರಿಸುವಲ್ಲಿ ಕಡ್ಡಾಯವಾಗಬಾರದು. ಹಿರಿಯ ನಾಗರಿಕರಿಗೆ ಅನುಸರಿಸುವಂತೆ ಪ್ರಯಾಣದ ಅವಧಿಯಲ್ಲಿ ಮಾತ್ರ ಪರಿಶೀಲನೆ ಪದ್ಧತಿ ಅನುಸರಿಸಬೇಕು. ಕೇಂದ್ರ ಸರಕಾರ ನೀಡುತ್ತಿರುವ ಸಾರ್ವತ್ರಿಕ ಗುರುತಿನ ಚೀಟಿಯನ್ನೇ ರಿಯಾಯಿತಿ ಟಿಕೆಟ್ ನೀಡಲು ಇಲಾಖೆ ಪರಿಗಣಿಸಬೇಕು. ಪ್ರತ್ಯೇಕವಾಗಿ ಟ್ರೈನ್ಪಾಸ್ ಮಾಡಿಸಿಕೊಳ್ಳುವ ಪದ್ಧತಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಕಾರ್ಯದರ್ಶಿ ಸಿ.ಕುಮಾರಿ, ಸಂಘದ ಅಧ್ಯಕ್ಷ ಕುಮಾರ್, ದೊಡ್ಡಮರಿಗೌಡ, ಅಭಿಲಾಷ್ ಪಾಟೀಲ್, ಶಿವಣ್ಣ, ನಿಂಗಮ್ಮ, ಅಂಕರಾಜು, ನಾಗರಾಜು, ಪುಟ್ಟಸ್ವಾಮಿ, ಮಹದೇವಪ್ರಭು, ಸಣ್ಣಯ್ಯ, ಚನ್ನಬಸಪ್ಪ, ಇತರರು ಪಾಲ್ಗೊಂಡಿದ್ದರು