ಚಾರ್ಮಾಡಿಯಲ್ಲಿ ಕಾಡ್ಗಿಚ್ಚು : ನೂರಾರು ಎಕರೆ ಅರಣ್ಯ ನಾಶ
ಬಣಕಲ್, ಮಾ.1: ಚಾರ್ಮಾಡಿ ಘಾಟ್ನಲ್ಲಿ ಕಾಡ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ಭೂಮಿಯು ನಾಶ ಅರಣ್ಯ ಇಲಾಖೆ, ಅಗ್ನಿ ಶಾಮಕದಳದಿಂದ ಅಗ್ನಿ ಆರಿಸಲು ಹರಸಾಹಸ.
ಬುಧವಾರ ರಾತ್ರಿಯೆ ಬಿದಿರುತಳ ಸೊಮನಕಾಡು ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿದ್ದು ಚಾರ್ಮಾಡಿಯ ಹಸಿರ ಸಿರಿ ಉರಿದಿದೆ. ಚಾರ್ಮಾಡಿಯಲ್ಲಿ ಸುಮಾರು ನೂರಾರು ಎಕರೆ ಅರಣ್ಯ ಭೂಮಿ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಕಲಾಗಿದೆ. ಅರಣ್ಯ ಇಲಾಖೆಯವರು ಹಾಗೂ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸೊಮನಕಾಡು, ಮಲಯಮಾರುತದ ಆಸುಪಾಸು ವ್ಯಾಪ್ತಿಯಲ್ಲಿ ರಸ್ತೆ ಬದಿಯಿಂದಲೇ ಬೆಂಕಿ ಆವರಿಸಿದೆ. ನಂತರ ಮುರಿದು ಬಿದ್ದ ಒಣ ಮರಗಳಿಗೆ ಹತ್ತಿಕೊಂಡ ಬೆಂಕಿ ಸುಮಾರು ದೂರ ಆವರಿಸಿದ್ದು ಅರಣ್ಯ ಇಲಾಖೆಯರು ಬೆಂಕಿಯನ್ನು ನಂದಿಸಿದ್ದಾರೆ. ಗುರುವಾರ ಬೆಳಗ್ಗೆಯೂ ಒಣಮರಗಳಲ್ಲಿ ಕಾಣುತ್ತಿದ್ದ ದಟ್ಟ ಹೊಗೆಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ನಂದಿಸಿದ್ದಾರೆ.
ಬೆಂಕಿ ನಂದಿಸಲು ಎರಡು ತಂಡ ರಚಿಸಲಾಗಿದ್ದು ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಆದಷ್ಟು ದೂರದ ಬೆಂಕಿಯನ್ನು ನಂದಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ಭಾಗದ ಅರಣ್ಯವು ಸುಟ್ಟು ಹೋಗಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಕಿಶೋರ್ ತಿಳಿಸಿದ್ದಾರೆ.