ಚೆಲುವರಾಯಸ್ವಾಮಿ ಬೆಂಬಲಿಗರಿಂದ ಡಾಬಾ ಮಾಲಿಕನಿಗೆ ಹಲ್ಲೆ: ಆರೋಪ
12 ಮಂದಿ ವಿರುದ್ಧ ಪೊಲೀಸರಿಗೆ ದೂರು
ನಾಗಮಂಗಲ, ಮಾ.21: ಜೆಡಿಎಸ್ ಬಂಡಾಯ ಶಾಸಕ ಎನ್. ಚೆಲುವರಾಯಸ್ವಾಮಿ ಬೆಂಬಲಿಗರು ಕ್ಷುಲ್ಲಕ ಕಾರಣಕ್ಕೆ ಡಾಬಾ ಮಾಲೀಕರ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಶ್ರೀರಾಮನಹಳ್ಳಿ ಗೇಟ್ ವೃತ್ತದಲ್ಲಿ ನಡೆದಿದೆ ಎನ್ನಲಾಗಿದೆ.
ಲಕ್ಷ್ಮಿ ಡಾಬಾದ ಮಾಲಕ ದೇವರಾಜು ಮತ್ತು ಸಹೋದರ ರೇವಣ್ಣ ಹಲ್ಲೆಗೊಳಗಾಗಿದ್ದಾರೆ. ಈ ಸಂಬಂಧ ನಾಗಮಂಗಲ ಪಟ್ಟಣದ ಪ್ರವೀಣ ಮತ್ತು ಮಹೇಶ್ ಯಾನೆ ಬಾಂಡ್ಲಿ, ಕಾಳಿ ಸೇರಿದಂತೆ 12 ಮಂದಿ ವಿರುದ್ಧ ದೇವರಾಜು ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: ಮಾ.17ರ ತಡರಾತ್ರಿ ಪ್ರವೀಣ ಮತ್ತು ಸಹಚರರು ಡಾಬಾಗೆ ಬಂದು ಊಟ ಕೇಳಿದ್ದು, ರಜೆ ಇದೆಯೆಂದು ಮಾಲಕ ದೇವರಾಜು ಹೇಳಿದ್ದಾರೆ. ಈ ವಿಚಾರವಾಗಿ ವಾಗ್ವಾದ ನಡೆದು ಪ್ರವೀಣ ಮತ್ತು ಸಹಚರರು ಹೊಟೇಲ್ ಪರಿಕರಗಳನ್ನು ಹಾನಿಗೊಳಿಸಿದ್ದಾರೆ. ಮಧ್ಯಪ್ರವೇಶಿಸಿ ಸ್ಥಳೀಯರು ಮಾತುಕತೆ ನಡೆಸಿ ಪ್ರವೀಣ್ ಮತ್ತು ಸಹಚರರು ಡಾಬಾದ ಪರಿಕರಗಳ ನಷ್ಟ ಪರಿಹಾರವಾಗಿ 5 ಸಾವಿರ ರೂ. ಪಾವತಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ಪ್ರವೀಣ್ ಡಾಬಾ ಮಾಲೀಕ ದೇವರಾಜು ವಿರುದ್ಧ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಮಾ.20 ರಂದು ಸಂಜೆ ಶಾಸಕ ಚೆಲುವರಾಯಸ್ವಾಮಿ ಡಾಬಾಗೆ ಭೇಟಿ ನೀಡಿ ಮಾತುಕತೆ ನಡೆಸಿ ಹೋಗಿದ್ದಾರೆ. ಶಾಸಕರು ಹೋದ ಕೆಲವೇ ನಿಮಿಷದಲ್ಲಿ ಪ್ರವೀಣ ಮತ್ತು ಸಹಚರರು ಡಾಬಾ ಮಾಲಕ ದೇವರಾಜು, ಬಿಡಿಸಲು ಬಂದ ಸಹೋದರ ರೇವಣ್ಣನ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.
ಈ ಸಂಬಂಧ ದೇವರಾಜು ಪ್ರವೀಣ್ ಮತ್ತು ಸಹಚರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಎಲ್ಲಾ ಘಟನೆಗಳ ದೃಶ್ಯಗಳು ಡಾಬಾದ ಸಿಸಿ ಕೆಮೆರಾದಲ್ಲಿ ದಾಖಲಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ತಾಲೂಕಿನಲ್ಲಿ ರಾಜಕೀಯ ಗಲಾಟೆಗಳು ಶುರುವಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.