ದಾವಣಗೆರೆ: ಬಿಜೆಪಿಯ ಮುಷ್ಠಿಧಾನ್ಯ ಅಭಿಯಾನ ನಿಷೇಧಿಸಲು ಒತ್ತಾಯಿಸಿ ದೂರು
ದಾವಣಗೆರೆ.ಎ.06 : ಬಿಜೆಪಿ ಹಮ್ಮಿಕೊಂಡಿರುವ ಮುಷ್ಠಿಧಾನ್ಯ ಅಭಿಯಾನ ಚುನಾವಣಾ ನೀತಿ ಸಂಹಿತೆಯ ವಿರುದ್ಧವಾಗಿದ್ದು, ತಕ್ಷಣದಿಂದಲೇ ನಿಷೇಧಿಸಲು ಆಗ್ರಹಿಸಿ ದಾವಣಗೆರೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ನೇತೃತ್ವದ ನಿಯೋಗ ದೂರು ನೀಡಿದೆ.
ಚುನಾವಣೆ ನೀತಿ ಸಂಹಿತೆ ಕಾಯ್ದೆ ಪ್ರಕಾರ ದೇವಸ್ಥಾನದ ಆರತಿ ತಟ್ಟೆಗೆ ಹಾಗೂ ಮಹಿಳೆಯರು ಆರತಿ ತಟ್ಟೆ ಎತ್ತಿದ್ದಾಗ ಹಣ ಹಾಕುವುದು ಅಕ್ರಮ ಎಂದು ಚುನಾವಣಾ ಆಯೋಗ ಈಗಾಗಲೇ ಕಾಯ್ದೆ ರೂಪಿಸಿದ್ದು, ಬಿಜೆಪಿಯವರು ಕಂಡ ಕಂಡವರ ಮನೆಗೆ ಹೋಗಿ ಮುಷ್ಠಿ ಧಾನ್ಯ ಪಡಿಯುವರೋ ಹಣ ಹಂಚುತ್ತಾರೋ ಯಾರಿಗೆ ಗೊತ್ತು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯದ ಯೋಜನೆಯನ್ನು ಮುಷ್ಠಿಧಾನ್ಯ ನೆಪದಲ್ಲಿ ಸಂಗ್ರಹ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರು ಹಾಗೂ ದಾವಣಗೆರೆ ಜಿಲ್ಲಾ ಚುನಾವಣಾಧಿಕಾರಿಗಳಿಗೂ ದೂರು ನೀಡಿ ಶೀಘ್ರ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಅಲ್ಲಾವಲ್ಲಿ ಘಾಜಿಖಾನ್, ಅಶ್ರಪ್ ಅಲಿ, ಕೆಜಿ. ರಹಮತ್ತುಲ್ಲಾ, ಖಲೀಲ್ ಅಹ್ಮದ್, ಡಿ. ಶಿವಕುಮಾರ್, ಲಿಯಾಖತ್ ಅಲಿ, ಅಬ್ದುಲ್ ಜಬ್ಭಾರ್, ಅಯಾಜ್ ಇತರರು ಇದ್ದರು.