ನೀವು ಸರ್ಕಾರದ ಗುಲಾಮರಾಗಿ ಕೆಲಸ ಮಾಡಬೇಡಿ: ಚುನಾವಣಾಧಿಕಾರಿಗಳ ವಿರುದ್ಧ ಕುಮಾರಸ್ವಾಮಿ ಗರಂ
ಕೊಪ್ಪಳ,ಎ.11: ಚುನಾವಣಾಧಿಕಾರಿಗಳ ವಿರುದ್ಧ ಗರಂ ಆಗಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ನೀವು ಸರ್ಕಾರದ ಗುಲಾಮರಾಗಿ ಕೆಲಸ ಮಾಡಬೇಡಿ. ಬದಲಾಗಿ 6.5 ಕೋಟಿ ಜನರ ಪರ ಕೆಲಸ ಮಾಡಿ ಎಂದು ಖಾರವಾಗಿ ಸಲಹೆ ನೀಡಿದ್ದಾರೆ.
ಕೊಪ್ಪಳದಲ್ಲಿ ಇಂದು ನಡೆದ ವಿಕಾಸ ಪರ್ವ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಚುನಾವಣಾ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಿಟರ್ನಿಂಗ್ ಆಫಿಸರ್ ಗಳು ನಮಗೆ ತೊಂದರೆ ಕೊಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ತಾವರಗೇರಾ ಸಮೀಪದಲ್ಲಿ ನಮ್ಮ ವಾಹನ ಜಪ್ತಿ ಮಾಡಿದ್ದಾರೆ. ಚಾಲಕರಿಗೆ ಕೊಟ್ಟ ಸಂಬಳದ ಹಣವಿದ್ದ ಕಾರಣಕ್ಕೆ ವಾಹನ ಜಪ್ತಿ ಮಾಡಿದ್ದಾರೆ. ಜತೆಗೆ ಕೂಡ್ಲಗಿ ಬಳಿ ಸಮಾವೇಶ ನಡೆಸಲು ಅನುಮತಿ ನೀಡುತ್ತಿಲ್ಲ. ಇದ್ಯಾವ ಸೀಮೆಯ ಚುನಾವಣಾ ಆಯೋಗ ಎಂದು ಕಿಡಿಕಾರಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಬರೀ ದೌರ್ಭಾಗ್ಯಗಳನ್ನೇ ನೀಡಿದ್ದಾರೆ. ಅದನ್ನು ನಾನು ಸರಿಪಡಿಸುತ್ತೇನೆ. ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.