ಆನೇಕಲ್: ಕಂಟೈನರ್ಗೆ ಲಾರಿ ಢಿಕ್ಕಿ; ಇಬ್ಬರ ಸಜೀವ ದಹನ
ಆನೇಕಲ್, ಎ.13: ಕಂಟೈನರ್ ಮತ್ತು ಗೂಡ್ಸ್ ಲಾರಿ ನಡುವೆ ಸಂಭವಿಸಿದ ಅಪಘಾತದ ವೇಳೆ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ನ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಮೃತರಿಬ್ಬರು ತಮಿಳುನಾಡು ಮೂಲದವರಾಗಿದ್ದು, ಓರ್ವರನ್ನು ತಂಜಾವೂರಿನ ವೇಲುಮುರುಗನ್(25) ಎಂದು ಗುರುತಿಸಲಾಗಿದೆ. ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಇಬ್ಬರೂ ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಮೃತದೇಹದ ಗುರುತು ಪತ್ತೆ ಕಷ್ಟಕರವಾಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ಗೆ ಗೂಡ್ಸ್ ಲಾರಿ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ನಿನ್ನೆ ಮಧ್ಯರಾತ್ರಿ ಹೊಸೂರು ಕಡೆಯಿಂದ ಬಂದ ಗೂಡ್ಸ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎರಡು ವಾಹನಗಳಿಗೆ ವ್ಯಾಪಸಿದೆ. ಲಾರಿಯೊಳಗಿದ್ದ ಇಬ್ಬರು ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳಲಾಗದೆ ಸಜೀವ ದಹನವಾಗಿದ್ದಾರೆ.
ಕಂಟೈನರ್ ವಾಹನದಲ್ಲಿ ಕೆಮಿಕಲ್ ಇದ್ದು ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.