ಮಡಿಕೇರಿ: ಅಮ್ಮತ್ತಿ ಕೊಡವ ಸಮಾಜದಲ್ಲಿ ಗಮನ ಸೆಳೆದ ಪೊಮ್ಮಕ್ಕಡ ನಾಳ್ ಕಾರ್ಯಕ್ರಮ
ಮಡಿಕೇರಿ ಏ.18 : ಅಮ್ಮತ್ತಿ ಕೊಡವ ಸಮಾಜದಲ್ಲಿ ಪೊಮ್ಮಕ್ಕಡ ನಾಳ್ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲ್ಪಿಟ್ಟಿತು. ಕೊಡವ ಸಮಜಾದ ನಿರ್ದೇಶಕಿ ಹಾಗೂ ಪೊಮ್ಮಕ್ಕಡ ನಾಳ್ ಕಾರ್ಯಕ್ರಮದ ಸಂಚಾಲಕಿ ಮಚ್ಚಾರಂಡ ಶಾಲಿ ಬೋಪಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಮಹಿಳೆಯರಿಗೆ ಕಾರ್ಯಕ್ರಮದ ಅಂಗವಾಗಿ ತರಕಾರಿ ಕೆತ್ತನೆ, ಬೇಕಿಂಗ್ ತರಬೇತಿ, ಮೊಕ್ಟೈಲ್ ಪ್ರಾತ್ಯಕ್ಷಿಕೆ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಗಂಗಾ ಚಂಗಪ್ಪ ಮಾತನಾಡಿ, ಮಹಿಳೆಯರು ಮನೆಯಲ್ಲಿದ್ದರೂ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿ ಯಾವುದಾದರು ಉತ್ತಮ ಕಾರ್ಯ ನಿರ್ವಹಿಸಲಬೇಕು ಎಂದು ಸಲಹೆ ನೀಡಿದರು.
ಅತಿಥಿ ನೆಕ್ಟ್ಫ್ರೆಸ್ ಹನಿ ಸಂಸ್ಥೆಯ ಕುಪ್ಪಂಡ ಛಾಯಾ ನಂಜಪ್ಪ ಮಾತನಾಡಿ, ಮಹಿಳೆಯರು ಮನೆ ಕೆಲಸದಲ್ಲಿ ಮಾತ್ರ ನಿರತವಾಗಿರದೇ ಔದ್ಯೋಗಿಕವಾಗಿಯೂ ತೊಡಗಿಸಿಕೊಂಡು ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾನಿಲಯದ ಮಂಡೇಪಂಡ ಕಾವೇರಿ ಮಂದಣ್ಣ ಮಾತನಾಡಿ, ಆರ್ಕಿಡ್ ಬೆಳೆಯ ಪಾತ್ಯಕ್ಷಿಕೆ ಸಹಿತ ಮಹಿಳೆಯರಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಚ್ಚಾರಂಡ ಶಾಲಿ ಬೋಪಣ್ಣ ಮಾತನಾಡಿ, ಕೇವಲ ಸ್ವಾರ್ಥ ಮನೋಭಾವನೆ ಹೊಂದದೆ ಮಹಿಳೆಯರು ಸಮಾಜಕ್ಕೆ ಏನಾದರೂ ಕೊಡುಗೆ ನೀಡುತ್ತಿರಬೇಕು. ಮಹಿಳೆಯರಲ್ಲಿ ಈ ವಿಶೇಷ ಸಾಮರ್ಥ್ಯವಿದೆ ಎಂದು ಅಭಿಪ್ರಾಯಪಟ್ಟರು.
ತರಕಾರಿ ಕೆತ್ತನೆಯ ತೀರ್ಪುಗಾರರಾಗಿ ಮಂಡೇಪಂಡ ಬಿಂದು ಅಯ್ಯಣ್ಣ ಹಾಗೂ ಮನೆಯಪಂಡ ವಿವಿನ್ ಅಯ್ಯಣ್ಣ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಆಯೋಜಕ ಸಮಿತಿಯ ಪ್ರಮುಖರಾದ ಮೂಕೋಂಡ ಕಲ್ಪನಾ ದೇವಯ್ಯ, ಕುಟ್ಟಂಡ ರುಕ್ಕು ಅಯ್ಯಪ್ಪ, ಮೊಳ್ಳೆರ ಜೂಬಿ ಅಪ್ಪಚ್ಚು, ನೆಲ್ಲಮಕ್ಕಡ ರೂಪಾ ದೇವಯ್ಯ, ಬಲ್ಪಿಕಾಳಂಡ ನಳಿನಿ ಮೇದಪ್ಪ, ಪಾಲಚಂಡ ರೇಷ್ಮ ಮುತ್ತಣ್ಣ, ಮಂಡೇಪಂಡ ಪೂನಂ ಉತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಚೋವಂಡ ಜಮುನಾ ಸುರೇಶ್ ಪ್ರಾರ್ಥಿಸಿ, ಸಮಾಜದ ನಿರ್ದೇಶಕಿ ಮಂಡೇಪಂಡ ಗೀತಾ ಮಂದಣ್ಣ ವಂದಿಸಿದರು. ಬೆಳಗ್ಗಿನಿಂದ ಸಂಜೆ ತನಕ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಅಮ್ಮತ್ತಿ ಕಾವಾಡಿ ಮಹಿಳಾ ತಂಡದ ಸದಸ್ಯರಿಂದ ಕಿರು ನಾಟಕ ಪ್ರದರ್ಶನ ನೆರವೇರಿತು.