ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ: ಶಾಸಕ ಶಿವರಾಮ ಹೆಬ್ಬಾರ
ಯಲ್ಲಾಪುರ(ಮುಂಡಗೋಡ),ಎ.21 : ನಾವು ಕಾಮ್ ಕಿ ಬಾತ್ ಬಗ್ಗೆ ಮಾತನಾಡುತ್ತೇವೆ ಮನ್ ಕಿ ಬಾತ್ ಅಲ್ಲ. ನಾವು ಏನು ಹೇಳಿದ್ದೇವೆ ಅದನ್ನು ಮಾಡಿದ್ದೇವೆ. ಏನು ಮಾಡಿದ್ದೇವೆ, ಅದನ್ನೇ ಹೇಳುತ್ತಿದ್ದೇವೆ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಗುರುವಾರ ನಾಮಪತ್ರಸಲ್ಲಿಸುವ ಮುನ್ನ ಮಾರಿಕಾಂಬದೇವಿಗೆ ಪೂಜೆ ಸಲ್ಲಿಸಿ ವಾಯ್.ಟಿ.ಎಸ್.ಎಸ್ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಹೇಳಿದ್ದೇನು, ಮಾಡಿದ್ದೇನು? ಕಾಂಗ್ರೆಸ್ ಹೇಳಿದಂತೆ ನಡೆದುಕೊಂಡಿದೆ. ಸಿದ್ದರಾಮಯ್ಯರ ಶಕ್ತಿಯನ್ನು ಅರಿತು ದೇಶದ ಘಟಾನುಘಟಿಗಳು ಸಿದ್ದರಾಮಯ್ಯರನ್ನು ಮಣಿಸಲು ಆಗಮಿಸಿದ್ದಾರೆ. ಈ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಬೂತ್ ಮಟ್ಟದಲ್ಲಿ ಪಕ್ಷದ ಸಭೆ ನಡೆಸಿದ್ದೇನೆ. ಕಳೆದ 15 ದಿನಗಳ ಹಿಂದೆ 42 ಪಂಚಾಯತ್ ಸೇರಿದಂತೆ ಎರಡು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸುತ್ತಿ ಸಭೆಗಳನ್ನು ಮಾಡಿದ್ದೇನೆ. ಈ ಚುನಾವಣೆಯು ಕೇವಲ ಕರ್ನಾಟಕ ಚುನಾವಣೆಯಲ್ಲ. 2019 ರ ಲೋಕಸಭೆಯ ದಿಕ್ಸೂಚಿ ಎಂದರು.
ವಿಧಾನ ಪರಿಷತ್ ಸದಸ್ಯ ಮಾತನಾಡಿ ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ವಿದೇಶಿ ಬ್ಯಾಂಕ್ ಗಳಲ್ಲಿರುವ ಕಾಳಧನವನ್ನು ತಂದು ಎಲ್ಲರ ಅಕೌಂಟ್ಗೆ 15 ಲಕ್ಷ ಹಾಕುತ್ತೇವೆ ಅಂದವರು 15 ಪೈಸೆನೂ ಹಾಕಲಿಲ್ಲ. ಉತ್ತರ ಕನ್ನಡ ಲೋಕಸಭ ಸದಸ್ಯ ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆ ಕೇವಲ ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದರು
ಕಾರ್ಯಕ್ರಮದಲ್ಲಿ ಮುಂಡಗೋಡ ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ಎಚ್ ಎಮ್ ನಾಯಕ್, ಪಿ.ಎಸ್.ಸಂಗೂರಮಠ, ವಿ.ಎಸ್.ನಾಯಕ, ಪ್ರಚಾರ ಸಮಿತಿ ಅಧ್ಯಕ್ಷ ಲಿಂಗರಾಜ ಕನ್ನೂರ, ಸಿ.ಎಸ್.ನಾಯಕ್, ಆರ್.ಎನ್.ಹೆಗಡೆ ಸೇರಿದಂತೆ ಯಲ್ಲಾಪುರ, ಮುಂಡಗೋಡ ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯರು ಹಾಗೂ ವಿವಿಧ ಗ್ರಾಮ ಪಂಚಾಯತ್ ಗಳ ಕಾಂಗ್ರೆಸ್ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು