ಹೊಲದ ಬದು ಹಾಳು: ಬಿಜೆಪಿ ವಿರುದ್ಧ ರೈತನ ದೂರು
ಅಮಿತ್ ಶಾಗಾಗಿ ಹೆಲಿಪ್ಯಾಡ್ ನಿರ್ಮಾಣ
ಬಾಗಲಕೋಟೆ, ಎ. 28: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸುತ್ತಿದ್ದ ಹೆಲಿಕಾಪ್ಟರ್ ಇಳಿಸಲು ತಾತ್ಕಾಲಿಕವಾಗಿ ಹೆಲಿಪ್ಯಾಡ್ ನಿರ್ಮಾಣದ ವೇಳೆ ರೈತನ ಅನುಮತಿ ಇಲ್ಲದೆ ಆತನ ಹೊಲದ ಬದು ಹಾಳು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಶನಿವಾರ ಇಲ್ಲಿನ ಇಳಕಲ್ ನಗರದಲ್ಲಿ ಬಿಜೆಪಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಆಗಮಿಸಿದ್ದರು. ಈ ವೇಳೆ ಅಮಿತ್ ಶಾ ಬರುವ ಹೆಲಿಕಾಪ್ಟರ್ ಇಳಿಸಲು ಇಳಕಲ್ನ ಉಚನೂರು ರಸ್ತೆಯಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಹೆಲಿಪ್ಯಾಡ್ ನಿರ್ಮಿಸುವಾಗ ನಮ್ಮ ಅನುಮತಿ ಪಡೆದಿಲ್ಲ. ಹೊಲದ ಬದು ನಾಶ ಮಾಡಿದ್ದನ್ನು ಪ್ರಶ್ನಿಸಿದಾಗ ಬಿಜೆಪಿ ಮುಖಂಡರು ನನ್ನನ್ನು ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಕೃಷಿ ಭೂಮಿಯಲ್ಲಿ ಜೆಸಿಬಿ ಬಳಸಿ ಹಾಳು ಮಾಡಲಾಗಿದೆ ಎಂದು ಉಚನೂರಿನ ರೈತ ಜಗದೀಶ್ ಕರಡಿ ಪೊಲೀಸರಿಗೆ ದೂರು ನೀಡಿದ್ದಾರೆ.
Next Story